ಬೆಳಗಾವಿ, ಅ 21 (DaijiworldNews/DB): ಒಂದು ವರ್ಷ ಹತ್ತು ತಿಂಗಳು ಹಿಂದೆ ಗ್ರಾಮ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಸೋಲನುಭವಿಸಿ ಮರು ಮತ ಎಣಿಕೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿ ಮರು ಮತ ಎಣಿಕೆಯಲ್ಲೂ ಸೋಲನುಭವಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲನುಭವಿಸಿದ್ದ ರಾವಸಾಬ ಪಾಟೀಲ್ ಅವರೇ ಮರು ಮತ ಎಣಿಕೆಯಲ್ಲಿಯೂ ಸೋಲನುಭವಿಸಿದವರು.
2020ರ ಡಿ. 30ರಂದು ಗ್ರಾಮ ಪಂಚಾಯತ್ಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯ ವಾರ್ಡ್ ನ 02ರಲ್ಲಿ ತವನಪ್ಪ ಹೊಸೂರೆ 506 ಮತಗಳೊಂದಿಗೆ ಗೆದ್ದಿದ್ದರು. ರಾವಸಾಬ ಪಾಟೀಲ್ 505 ಮತ ಪಡೆದು ಕೇವಲ ಒಂದು ಮತದ ಅಂತರದಲ್ಲಿ ಪರಾಭವಗೊಂಡಿದ್ದರು. ಇದರಿಂದ ಅಸಮಾಧಾನಗೊಂಡ ರಾವಸಾಬ ಪಾಟೀಲ್ ಮರು ಮತ ಎಣಿಕೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಚುನಾವಣಾಧಿಕಾರಿ ಅವಕಾಶ ಕಲ್ಪಿಸಿರಲಿಲ್ಲ. ಹೀಗಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ರಾವಸಾಬ ಅವರ ಮನವಿ ಪುರಸ್ಕರಿಸಿ ಮರು ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಅದರಂತೆ ನ್ಯಾಯಾಧೀಶರು ಹಾಗೂ ಹುಕ್ಕೇರಿ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಸಮ್ಮುಖದಲ್ಲಿ ಮತ ಎಣಿಕೆಗೆ ನಿರ್ಧರಿಸಯಿತು. ಅದರಂತೆ ಇಂದು (ಅಕ್ಟೋಬರ್ 21) ಬಿಗಿ ಪೊಲೀಸ್ ಭದ್ರತೆಯಡಿ ಮರು ಮತಎಣಿಕೆ ನಡೆದಿತ್ತು. ಇದರಲ್ಲಿ ಪರಾಜಿತ ಅಭ್ಯರ್ಥಿಗೆ ಮತ್ತೆ ಸೋಲಾಗಿದೆ.