ತಿರುವನಂತಪುರ, ಅ 21 (DaijiworldNews/DB): ಸಾಲ ತೀರಿಸಲೆಂದು ಕೆಲಸಕ್ಕೆ ಸೇರಿದ ಪತ್ನಿಯನ್ನು ಪತಿ ಥಳಿಸಿ ವೀಡಿಯೋ ವೈರಲ್ ಮಾಡಿದ ಅಮಾನುಷ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿಲೀಪ್ (27) ಬಂಧಿತ ಆರೋಪಿ. ಸಾಲ ತೀರಿಸಲೆಂದು ಈತನ ಪತ್ನಿ ಸೂಪರ್ ಮಾರ್ಕೆಟ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಆಕೆ ಕೆಲಸಕ್ಕೆ ಹೋಗುವುದನ್ನು ಸಹಿಸದ ದಿಲೀಪ್, ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ತಾನು ಸಾಲ ತೀರಿಸುವುದಕ್ಕಾಗಿ ಕೆಲಸಕ್ಕೆ ಸೇರಿರುವುದಾಗಿ ಆಕೆ ಪರಿಪರಿಯಾಗಿ ಬೇಡಿಕೊಂಡರೂ ಈತ ಅಮಾನವೀಯತೆ ಮೆರೆದಿದ್ದಾನೆ. ಬಳಿಕ ವೀಡಿಯೋವನ್ನು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ.
ಇತ್ತ ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಮಲಯಿಂಕೀಝು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಿಂದಾಗಿ ಮಹಿಳೆಯ ಮೂಗಿಗರ ಗಾಯವಾಗಿದ್ದು, ಬಾಯಿಯನ್ನು ಜಜ್ಜಿದ್ದಾನೆ. ಮುಖದ ಮೇಲೆ ರಕ್ತ ಕೂಡಾ ಬಂದಿದ್ದು, ಇದಕ್ಕೆ ನಾನೇ ಕಾರಣ ಎಂದು ಆತ ಹೇಳಿದ್ದಾನೆ. ಆರೋಪಿಯ ಪತ್ನಿ ನೀಡಿದ ದೂರಿನ ಮೇರೆಗೆ ಮಲಯಂಕಿಝು ಪೊಲೀಸರು ಆತನನ್ನು ಬಂಧಿಸಿದ್ದು, ಕೊಲೆ ಯತ್ನ ಮತ್ತು ಇತರ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.