ಲಕ್ನೊ, ಅ 21 (DaijiworldNews/DB): ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಡೆಂಗ್ಯೂ ರೋಗಿಯೊಬ್ಬರು ಮೃತಪಟ್ಟಿದ್ದು, ಪ್ಲೇಟ್ಲೆಟ್ ಬದಲಾಗಿ ಹಣ್ಣಿನ ರಸ ನೀಡಿರುವುದೇ ಸಾವಿಗೆ ಕಾರಣ ಎಂದು ಮೃತ ವ್ಯಕ್ತಿಯ ಕುಟುಂಬ ಆರೋಪಿಸಿದೆ.
32 ವರ್ಷದ ವ್ಯಕ್ತಿ ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ನ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ನಲ್ಲಿ ದಾಖಲಾಗಿದ್ದರು. ಆದರೆ ಇಲ್ಲಿ ಪ್ಲಾಸ್ಮಾ ಎಂದು ಬ್ಯಾಗ್ನಲ್ಲಿ ಸಿಹಿ ನಿಂಬೆ ರಸವನ್ನು ಆಸ್ಪತ್ರೆ ಸಿಬಂದಿ ರೋಗಿಗೆ ನೀಡಿದ್ದಾರೆ. ಇದರಿಂದ ರೋಗಿಯ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಆತನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಆತ ಮೃತಪಟ್ಟಿದ್ದಾನೆ. ಅಲ್ಲದೆ ಮೊದಲನೇ ಆಸ್ಪತ್ರೆಯಲ್ಲಿ ನೀಡಿದ ಪ್ಲೇಟ್ಲೆಟ್ ಬ್ಯಾಗ್ನಲ್ಲಿ ನಕಲಿ ಪ್ಲೇಟ್ಲೆಟ್ ಮತ್ತು ಮೂಸಂಬಿ ರಸದ ಮಿಶ್ರಣವಿದೆ ಎಂದು ಎರಡನೇ ಆಸ್ಪತ್ರೆಯವರು ಹೇಳಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಅಲ್ಲದೆ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಘಟನೆ ಸಂಬಂಧ ಜಿಲ್ಲಾಡಳಿತವು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆ ವೇಳೆ ಆಸ್ಪತ್ರೆಯ ಅಧಿಕಾರಿಗಳಿಂದ ಲೋಪವಾಗಿರುವುದು ಕಂಡು ಬಂದಿದೆ. ಹೀಗಾಗಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಘಟನೆ ಹಿನ್ನೆಲೆಯಲ್ಲಿ ಮುಖ್ಯ ವೈದ್ಯಾಧಿಕಾರಿಯವರ ಸೂಚನೆ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಮಾದರಿಯನ್ನು ಪರೀಕ್ಷಿಸುವವರೆಗೆ ಅದೇ ರೀತಿ ಮುಂದುವರಿಯಲಿದೆ ಎಂದು ಪ್ರಯಾಗರಾಜ್ನ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.