ಬೆಂಗಳೂರು, ಅ 20 (DaijiworldNews/HR): ಉತ್ತರ ಕನ್ನಡ ಜಿಲ್ಲೆ ಕುಮಟಾ ಭಾಗದಲ್ಲಿ ನಡೆದಿರುವ ಪರೇಶ್ ಮೆಸ್ತಾ ಸಾವಿನ ಪ್ರಕರಣ ಇದೀಗ ವಿಧಾನಸೌಧದ ಮೆಟ್ಟಿಲೇರಿದ್ದು, ಪರೇಶ್ ಮೆಸ್ತಾನ ತಂದೆ ಕಮಾಲಾಕರ್ ಮೆಸ್ತಾ ಅವರು ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿದ್ದಾರೆ.
ನನ್ನ ಮಗ ಪರೇಶ್ ಮೆಸ್ತಾನ ಸಾವು ಅಸಹಜ ಸಾವಾಗಿದ್ದು, ಸಿಬಿಐ ಸಾಕ್ಷಾಧಾರಗಳು ಲಭ್ಯ ಆಗಿಲ್ಲ ಎಂಬ ಕಾರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಇದರಿಂದ ನನಗೆ ನ್ಯಾಯ ವಂಚನೆ ಆಗಿದೆ. ನನ್ನ ಮಗ ಪರೇಶ್ ಮೆಸ್ತಾನ ಪ್ರಕರಣವನ್ನು ಸಿಬಿಐಗೆ ನೀಡುವಾಗ 4 ತಿಂಗಳ ಅವಧಿ ಮೀರಿದ್ದು, ಬಹುತೇಕ ಸಾಕ್ಷಾಧಾರಗಳು ನಾಶ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಆಳವಾದ ತನಿಖೆ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಪುನರಪಿ ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
ಕಮಾಲಕರ್ ಮೆಸ್ತಾ ಅವರ ಮನವಿಯನ್ನು ಆಲಿಸಿದ ಮಾನ್ಯ ಮುಖ್ಯಮಂತ್ರಿಗಳು ತಂದೆಯಾಗಿ ನಿಮ್ಮ ಕಷ್ಟ ಸರ್ಕಾರ ಅರ್ಥಮಾಡಿಕೊಳ್ಳುತ್ತದೆ. ಮನವಿಯನ್ನು ಪರಿಶೀಲಿಸಿ, ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್, ಮೀನುಗಾರಿಗಾ ಸಚಿವ ಎಸ್.ಅಂಗಾರ, ಶಾಸಕರಾದ ದಿನಕರ್ ಶೆಟ್ಟಿ, ಸುನಿಲ್ ನಾಯಕ್ ಹಾಗೂ ಕುಮಾರ ನಾರಾಯಣ ಮಾರ್ಕಾಂಡೇ ಅವರು ಜೊತೆಯಲ್ಲಿದ್ದರು.