ನವದೆಹಲಿ, ಅ 20 (DaijiworldNews/DB): ಬಿಜೆಪಿಯು ದೆಹಲಿಯನ್ನು ಆತ್ಮನಿರ್ಭರ್ ಮಾಡಬೇಕೆಂದು ಬಯಸಿದರೆ, ಎಎಪಿಯು ಎಎಪಿ ನಿರ್ಭರ್ ಮಾಡಲು ಮುಂದಾಗಿದೆ. ಎಂಸಿಡಿ ಚುನಾವಣೆಯಲ್ಲಿ ನಿಮಗೆ ಆತ್ಮನಿರ್ಭರ್ ಬೇಕೋ, ಎಎಪಿ ನಿರ್ಭರ್ ಬೇಕೋ ಎಂಬುದನ್ನು ಯೋಚಿಸಿ ಆಯ್ಕೆ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೆಹ್ಖಂಡ್ನಲ್ಲಿ ತ್ಯಾಜ್ಯದಿಂದ ಶಕ್ತಿ (ಡಬ್ಲ್ಯುಟಿಇ) ಸ್ಥಾವರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಹಿಂದಿನ ಮೂರು ನಾಗರಿಕ ಸಂಸ್ಥೆಗಳಿಗೆ ಮಲತಾಯಿ ಚಿಕಿತ್ಸೆ ನೀಡುವಲ್ಲಿ ಕೇಜ್ರೀವಾಲ್ ಸರ್ಕಾರ ಯಶಸ್ವಿಯಾಗಿದೆ. ಅಲ್ಲದೆ, ಮುನ್ಸಿಪಲ್ ಕಾರ್ಪೋರೇಶನ್ಗಳು 40 ಸಾವಿರ ಕೋಟಿ ರೂ. ಸಾಲದಲ್ಲಿ ಮುಳುಗುವಂತೆ ಮಾಡಿರುವುದೇ ಆ ಸರ್ಕಾರದ ಸಾಧನೆಯಾಗಿದೆ. ಹೀಗಾಗಿ ದೆಹಲಿಯು ಆತ್ಮನಿರ್ಭರ್ ಆಗಬೇಕೇ, ಎಎಪಿ ನಿರ್ಭರ್ ಆಗಬೇಕೇ ಎಂಬುದನ್ನು ಯೋಚಿಸಿ. ನಾವು ದೆಹಲಿ ಆತ್ಮನಿರ್ಭರ್ ಆಗಬೇಕೆಂದು ಬಯಸುತ್ತೇವೆ ಎಂದರು.
ಪ್ರಚಾರಕ್ಕಾಗಿ ಆಮ್ ಆದ್ಮಿ ಪಕ್ಷವು ಹಣದ ದುಂದುವೆಚ್ಚ ಮಾಡುತ್ತಿದೆ. ಜಾಹೀರಾತಿನಿಂದ ಅಭಿವೃದ್ದಿ ಎಂಬ ಯೋಚನೆ ಅವರದು. ಆದರೆ ಅವರ ಈ ಭ್ರಮೆ ಕೇವಲ ಐದರಿಂದ ಏಳು ವರ್ಷಗಳಷ್ಟೇ ಬಾಳಿಕೆ ಬರುತ್ತದೆ. ಜಾಹೀರಾತು ರಾಜಕೀಯ ಮತ್ತು ಅಭಿವೃದ್ದಿ ರಾಜಕೀಯದ ನಡುವೆ ಜನ ಆಯ್ಕೆ ಮಾಡಬೇಕಾಗುತ್ತದೆ ಎಂದು ಅಮಿತ್ ಶಾ ತಿಳಿಸಿದರು.