ಪಾಟ್ನಾ, ಅ 20 (DaijiworldNews/DB): ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಬಾಲಕ ತಂದಿದ್ದ ಚೀಟಿಯನ್ನು ಲವ್ ಲೆಟರ್ ಎಂದು ತಪ್ಪಾಗಿ ಭಾವಿಸಿದ ಬಾಲಕಿಯೊಬ್ಬಳ ಪೋಷಕರು ಚೀಟಿಯೊಳಗಡೆ ಏನಿದೆ ಎಂದೂ ನೋಡದೆ ಬಾಲಕನನ್ನು ಥಳಿಸಿ ಕೊಂದ ಘಟನೆ ಭೋಜ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಉದ್ವಂತನಗರದ 12 ವರ್ಷದ ಬಾಲಕ ದಯಾಕುಮಾರ್ ಹತ್ಯೆಗೊಳಗಾದಾತ. ಈತ ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಉದ್ದೇಶದಿಂದ ಚೀಟಿ ತಂದಿದ್ದ. ತಾನು ಕಾಪಿ ಹೊಡೆದ ಬಳಿಕ ಅಲ್ಲೇ ಇದ್ದ ಕಸಿನ್ನತ್ತ ಕಾಪಿ ಚೀಟಿ ಎಸೆದಿದ್ದಾನೆ. ಈ ವೇಳೆ ಆಕೆಯ ಬಳಿ ಬೀಳುವ ಬದಲು ಹಿಂದೆ ಇದ್ದ ಇನ್ನೊಬ್ಬ ಹುಡುಗಿಯ ಬಳಿ ಆ ಚೀಟಿ ಬಿದ್ದಿದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಆ ಬಾಲಕಿಯು ಸಹಪಾಠಿ ಬಾಲಕ ತನಗೆ ಲವ್ ಲೆಟರ್ ಎಸೆದಿರುವುದಾಗಿ ತನ್ನ ಸಹೋದರನಿಗೆ ದೂರಿತ್ತಿದ್ದಾಳೆ. ಆದರೆ ಬಾಲಕಿ ಮಾತನ್ನೇ ಗಂಭೀರವಾಗಿ ತೆಗೆದುಕೊಂಡ ಆಕೆಯ ಸಹೋದರ ಚೀಟಿಯಲ್ಲಿ ಏನಿದೆ ಎಂದೂ ನೋಡದೇ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಥಳಿಸಿ, ದೇಹವನ್ನು ಕತ್ತರಿಸಿ ಕೊಂದಿದ್ದಾರೆ. ಬಳಿಕ ಬಾಲಕನ ಅಂಗಾಂಗಗಳನ್ನು ರೈಲ್ವೇ ಹಳಿ ಮೇಲೆ ಎಸಗಿದ್ದಾರೆ ಎಂದು ಗಜ್ರಾಜ್ಗಂಜ್ ಔಟ್ಪೋಸ್ಟ್ ಇನ್ಚಾರ್ಜ್ ಚಂದನ್ಕುಮಾರ್ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಇತ್ತ ರೈಲ್ವೇ ಹಳಿ ಮೇಲೆ ದೇಹದ ಅಂಗಾಂಗಗಳು ಪತ್ತೆಯಾದ್ದರಿಂದ ಪೊಲೀಸರು ಆ ಕುರಿತು ತನಿಖೆ ಆರಂಭಿಸಿದಾಗ ಕೊಲೆ ಮಾಡಿರುವ ವಿಚಾರ ಬಯಲಾಗಿದೆ. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಬಾಲಕನ ಅಂಗಾಂಗಗಳು ಪತ್ತೆಯಾಗಿವೆ. ಘಟನೆ ಸಂಬಂಧಿಸಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಕೊಲೆಗೆ ಕಾರಣ ತಿಳಿದು ಪೊಲೀಸರು ಅವಾಕ್ಕಾಗಿದ್ದಾರೆ.