ಸಿಂಗ್ರೌಲಿ (ಮಧ್ಯಪ್ರದೇಶ), ಅ 20 (DaijiworldNews/DB): ಆ್ಯಂಬುಲೆನ್ಸ್ ಸಿಗದಕ್ಕೆ ನವಜಾತ ಶಿಶುವಿನ ಮೃತದೇಹವನ್ನು ವ್ಯಕ್ತಿಯೊಬ್ಬ ಬೈಕ್ಗೆ ಜೋಡಿಸಲಾದ ಬ್ಯಾಗ್ನಲ್ಲಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡಿದಿದೆ.
ಉತ್ತರ ಪ್ರದೇಶದ ನೆರೆಯ ಸೋನ್ಭದ್ರ ಜಿಲ್ಲೆಯ ನಿವಾಸಿ ದಿನೇಶ್ ಭಾರ್ತಿ ಎಂಬವರ ಪತ್ನಿಯನ್ನು ಹೆರಿಗೆಗಾಗಿ ಸಿಂಗ್ರೌಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆರಿಗೆಗೆ ಮುನ್ನ ಕೆಲವು ಪರೀಕ್ಷೆಗಳಿಗಾಗಿ ಜಿಲ್ಲಾಸ್ಪ್ತ್ರೆಯ ವೈದ್ಯರು ನಮ್ಮನ್ನು ಖಾಸಗಿ ಕ್ಲಿನಿಕ್ಗೆ ಕಳುಹಿಸಿದ್ದು, ಅಲ್ಲಿ ಕೆಲವು ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ 5,000 ರೂ. ಕಟ್ಟಬೇಕಾಯಿತು. ಆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಪತ್ನಿಗೆಗೆ ವೈದ್ಯರು ಹೆರಿಗೆ ಮಾಡಿಸಿದ್ದು, ಮಗು ಮೃತಪಟ್ಟಿತ್ತು. ಹೀಗಾಗಿ ಪತ್ನಿ ಮತ್ತು ಮೃತ ಮಗುವನ್ನು ಮನೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಕೇಳಿದಾಗ ಆಸ್ಪತ್ರೆಯಲ್ಲಿ ಯಾರೂ ನಮಗೆ ಸಹಾಯ ಮಾಡಲಿಲ್ಲ ಎಂದು ಭಾರ್ತಿ ಆರೋಪಿಸಿದ್ದಾರೆ.
ಆ್ಯಂಬುಲೆನ್ಸ್ ಸಿಗದ ಕಾರಣಕ್ಕಾಗಿ ಮೃತ ಮಗುವನ್ನು ಬೈಕ್ನಲ್ಲಿ ಜೋಡಿಸಲಾದ ಬ್ಯಾಗ್ನಲ್ಲಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ತಿಳಿದು ಬಂದಿದೆ.
ಇನ್ನು ಆಸ್ಪತ್ರೆಯಲ್ಲಿ ಖಾಸಗಿ ಕ್ಲಿನಿಕ್ಗೆ ಕಳುಹಿಸಿದ ವಿಚಾರವಾಗಿ ಹಾಗೂ ಆ್ಯಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ಸೂಕ್ತ ತನಿಖೆಗೆ ಸಿಂಗ್ರೌಲಿ ಜಿಲ್ಲಾಧಿಕಾರಿ ರಾಜೀವ್ ರಂಜನ್ ಮೀನಾ ಆದೇಶಿಸಿದ್ದಾರೆ. ಆರೋಪಗಳ ಕುರಿತು ಉಪ ವಿಭಾಗದ ಜಿಲ್ಲಾಧಿಕಾರಿ ನೇತೃತ್ವದ ತಂಡವು ತನಿಖೆ ನಡೆಸಲಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.