ನವದೆಹಲಿ, ಅ 20 (DaijiworldNews/DB): ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ದೀಪಕ್ ಟಿನುನನ್ನು ದೆಹಲಿ ಪೊಲೀಸ್ ವಿಶೇಷ ದಳವು ಬುಧವಾರ ಬಂಧಿಸಿದೆ.
ಗ್ಯಾಂಗ್ಸ್ಟರ್ ದೀಪಕ್ ಟಿನು ಅಕ್ಟೋಬರ್ 1ರಂದು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದನು. ಆತನ ಮರು ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರಿಗೆ ಅಡಗುತಾಣವನ್ನು ಆತ ಪದೇ ಪದೇ ಬದಲಾಯಿಸುತ್ತಲೇ ಇದ್ದುದರಿಂದ ಬಂಧನ ಸವಾಲಾಗಿತ್ತುಉ. ದೇಶದ ವಿವಿಧ ಕಡೆ ಶೋಧ ನಡೆಸಿದ ದೆಹಲಿ ವಿಶೇಷ ಪೊಲೀಸ್ ದಳ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ವಿಶೇಷ ದಳ) ಎಚ್ಜಿಎಸ್ ಧಲಿವಾಲ್ ತಿಳಿಸಿದ್ದಾರೆ.
ಐದು ಗ್ರೆನೇಡ್ ಹಾಗೂ ಎರಡು ಆಟೋಮ್ಯಾಟಿಕ್ ಪಿಸ್ತೂಲ್ನ್ನು ಆತನಿಂದ ಈವೇಳೆ ವಶಪಡಿಸಿಕೊಳ್ಳಲಾಗಿದೆ. ಸಿಧು ಮೂಸೆವಾಲಾ ಅವರನ್ನು ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.