ಯಾದಗಿರಿ, ಅ 20 (DaijiworldNews/DB): ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಖಾಸಗಿ ಬಸ್ಗಳ ಮಾಲಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಬಸ್ ಪರವಾನಗಿ ರದ್ದು ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೂರದೂರುಗಳಲ್ಲಿರುವವರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಖಾಸಗಿ ಬಸ್ಗಳಲ್ಲಿ ಪ್ರಯಾಣ ದರವನ್ನು ಏಕಾಏಕಿ ಏರಿಕೆ ಮಾಡಿ, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದಕ್ಕೆ ಬಸ್ ಮಾಲಕರು ಮುಂದಾದಲ್ಲಿ ಅಂತಹವರ ವಿರುದ್ದ ಕ್ರಮ ಅನಿವಾರ್ಯ. ಇದಕ್ಕಾಗಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ. ಅಲ್ಲದೆ ಚೆಕ್ಪೋಸ್ಟ್ಗಳನ್ನು ಹೆಚ್ಚಿಸಿ ಬಸ್ಗಳಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದರು.
ಈಗಾಗಲೇ ದೀಪಾವಳಿ ಸಂದರ್ಭದಲ್ಲಿ ಬಸ್ ಟಿಕೆಟ್ ದರ ಏರಿಸಿ ಹಲವು ಖಾಸಗಿ ಬಸ್ಗಳು ದುಪ್ಪಟ್ಟು ಹಣ ವಸೂಲಿಗಿಳಿದುವುದು ಗೊತ್ತಾಗಿದೆ. ಬೆಂಗಳೂರು-ಬಳ್ಳಾರಿ ನಡುವಿನ ಸಂಚಾರಕ್ಕೆ 1000 ರೂ-1500 ರೂ. ವರೆಗೆನಿಗದಿ ಮಾಡಿದ್ದಾರೆ. ಇನ್ನು ಅಕ್ಟೋಬರ್ 21ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚಾರಕ್ಕಾಗಿ ಖಾಸಗಿ ಟ್ರಾವೆಲ್ಸ್ವೊಂದು 5,000 ರೂ. ದರ ನಿಗದಿಗೊಳಿಸಿದೆ. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಬಸ್ ಮಾಲಕರು ಕ್ಯಾರೇ ಎನ್ನದೆ ಬಸ್ ದರವನ್ನು ಏರಿಕೆ ಮಾಡುತ್ತಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಸರ್ಕಾರಿಯಾಗಲೀ, ಖಾಸಗಿಯಾಗಲೀ ಯಾವುದೇ ಬಸ್ಗಳ ಟಿಕೆಟ್ ದರ ಏರಿಕೆ ಮಾಡುವಂತಿಲ್ಲ. ಯಥಾಸ್ಥಿತಿಯಲ್ಲೇ ದರ ಇರಬೇಕು. ಹೆಚ್ಚುವರಿ ವಸೂಲಿ ಮಾಡಿದರೆ ಅಂತಹವರ ಪರವಾನಗಿ ರದ್ದು ಮಾಡಲಾಗುವುದು ಎಂದು ಸೂಚಿಸಿದರು.