ಬೆಂಗಳೂರು, ಅ 20 (DaijiworldNews/DB): ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ದೀಪಾವಳಿಯಂದು ಗೋಪೂಜೆ ನೆರವೇರಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ದೀಪಾವಳಿಯ ಕೊನೆ ದಿನವಾದ ಬಲಿ ಪಾಡ್ಯಮಿಯಂದು (ಅಕ್ಟೋಬರ್ 26) ಸಂಜೆ 5.30ರಿಂದ 6.30ರ ನಡುವಿನ ಗೋಧೂಳಿ ಲಗ್ನದಲ್ಲಿ ಗೋಪೂಜೆ ನೆರವೇರಿಸಬೇಕು. ಸನಾತನ ಹಿಂದೂ ಧರ್ಮದ ಆಚರಣೆಯನ್ನು ಜನ ಮರೆಯಬಾರದು ಎಂಬ ನಿಟ್ಟಿನಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ಅರ್ಚಕರಿಗೆ ಮುಜರಾಯಿ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಗಳಿಗೆ ಜನರು ಕರೆ ತರಬೇಕು. ಬಳಿಕ ಕುಂಕುಮ, ಅರಿಶಿನ ಹಾಕಿ ಹೂವಿನಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣ ಹಾಗೂ ಇತರ ಸಿಹಿತಿಂಡಿಗಳನ್ನು ನೀಡಬೇಕು. ದೀಪ ಮತ್ತು ಧೂಪದಿಂದ ಗೋವುಗಳಿಗೆ ಪೂಜೆ ನೆರವೇರಿಸಬೇಕು ನಿರ್ದೇಶನದಲ್ಲಿ ಸೂಚನೆ ನೀಡಲಾಗಿದೆ.
ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಗೋವುಗಳನ್ನು ಪೂಜಿಸುತ್ತಾ ಬರಲಾಗಿದೆ. ಪಟ್ಟಣಗಳಲ್ಲಿರುವ ಜನ ಇತ್ತೀಚೆಗೆ ಈ ಆಚರಣೆಯನ್ನು ಮರೆತಿದ್ದಾರೆ. ಹೀಗಾಗಿ ಜನ ಅದನ್ನು ಮರೆಯದಂತೆ ಕಾಪಾಡಿಕೊಳ್ಳುವ ಸಲುವಾಗಿ ಮುಜರಾಯಿ ಇಲಾಖೆ ದೇವಳಗಳಲ್ಲಿ ಗೋಪೂಜೆ ಕಡ್ಡಾಯ ಮಾಡಲಾಗಿದೆ. ಈ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.