ಮಹಾರಾಷ್ಟ್ರ, ಅ 18 (DaijiworldNews/DB): ಪತ್ರಾ ವಾಲಾ ಚಾಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಅಕ್ಟೋಬರ್ 21 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಉತ್ತರ ಮುಂಬೈನ ಗೋರೆಗಾಂವ್ನಲ್ಲಿರುವ ಪತ್ರಾ ಚಾಲ್ನ ಮರು ಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಕಳೆದ ಜುಲೈನಲ್ಲಿ ಬಂಧಿಸಲ್ಪಟ್ಟಿರುವ ಸಂಜಯ್ ರಾವುತ್ ಅವರ ಜಾಮೀನು ಅರ್ಜಿಯ ಕುರಿತ ವಾದವನ್ನು ಸೋಮವಾರ ಜಾರಿ ನಿರ್ದೇಶನಾಲಯವು ಪೂರ್ಣಗೊಳಿಸಿದೆ. ಈ ಯೋಜನೆಯಲ್ಲಿ ರಾವುತ್ ಸಕ್ರಿಯವಾಗಿದ್ದರು. ಅಲ್ಲದೆ ಅವರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಸೂಕ್ತ ದಾಖಲೆಗಳಿಗೆ ಎಂಬುದಾಗಿ ಇಡಿಯು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯದಿಂದ ಕಳೆದ ತಿಂಗಳು ಜಾಮೀನು ಕೋರಿ ರಾವುತ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಅನಿಲ್ ಸಿಂಗ್ ಅವರು, ತನಿಖಾ ಸಂಸ್ಥೆಯು ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದು, ಈ ದಾಖಲೆ ಪ್ರಕಾರ ರಾವುತ್ ಯೋಜನೆ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದಿದ್ದಾರೆ.