ನವದೆಹಲಿ, ಅ 18 (DaijiworldNews/DB): ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಮೂಲಕ ನೂತನ ಅಧ್ಯಕ್ಷರ ಆಯ್ಕೆಯಾದರೂ ಗಾಂಧಿ ಕುಟುಂಬದ ದನಿ ಅಡಗಿ ಹೋಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದ ಬೆನ್ನಲ್ಲೇ ಮಾತನಾಡಿದ ಚಿದಂಬರಂ, ಪಕ್ಷದ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದೆ. ಕೆಲವೇ ದಿನಗಳಲ್ಲಿ ಹೊಸ ಅಧ್ಯಕ್ಷರ ಜವಾಬ್ದಾರಿ ಶುರುವಾಗಲಿದೆ. ಆದರೆ ಈ ಮೂಲಕ ಗಾಂಧಿ ಕುಟುಂಬದ ದನಿ ಅಡಗಿ ಹೋಗುವುದಿಲ್ಲ. ಅವರ ಮಾತನ್ನು ಪ್ರತಿಯೊಬ್ಬರೂ ಕೇಳಬೇಕು ಎಂದರು.
ಹೊಸ ಅಧ್ಯಕ್ಷರು ಗಾಂಧಿ ಪರಿವಾರದ ರಿಮೋಟ್ ಕಂಟ್ರೋಲ್ನಂತಿರಬೇಕಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಚಿದಂಬರಂ, ಇದು ಕೇವಲ ಊಹಾಪೋಹಗಳಷ್ಟೇ. ಪಕ್ಷದ ಸಂಘಟನಾತ್ಮಕ ಸಮಸ್ಯೆಗಳನ್ನು ಹೊಸ ಅಧ್ಯಕ್ಷರು ಮೊದಲು ನಿವಾರಿಸಬೇಕು. ಅಲ್ಲದೆ ಘಟಕಗಳಲ್ಲಿ ಚುನಾವಣೆಗಳನ್ನು ನಡೆಸಿ ಸಕ್ರಿಯ, ಸದೃಢ ತಂಡ ಕಟ್ಟುವಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಚುನಾವಣೆ ದಿನದಂದೇ ಚಿದಂಬರಂ ಅವರ ಈ ಹೇಳಿಕೆ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ನಲ್ಲಿ ಆಂತರಿಕ ಸುಧಾರಣೆಗೆ ವಾದಿಸಿದ್ದ ನಾಯಕರ ಪೈಕಿ ಚಿದಂಬರಂ ಕೂಡಾ ಒಬ್ಬರಾಗಿದ್ದು, ಕಾಂಗ್ರೆಸ್ ಅಧ್ಯಕ್ಷರು ಚುನಾವಣೆ ಮೂಲಕ ಆಯ್ಕೆಯಾಗಬೇಕು ಎಂದೂ ಒತ್ತಾಯಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಅಕ್ಟೋಬರ್ 17ರ ಸೋಮವಾರ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನಾಳೆ (ಅಕ್ಟೋಬರ್ 19) ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಇವರಿಬ್ಬರಲ್ಲಿ ಅಧ್ಯಕ್ಷ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.