ಚೆನ್ನೈ, ಅ 18 (DaijiworldNews/DB): ತಮಿಳುನಾಡು ಮಾಜಿ ಸಿಎಂ ಜೆ. ಜಯಲಲಿತಾ ಸಾವಿನ ಕುರಿತು ಇಂದು ತಮಿಳುನಾಡು ವಿಧಾನಸಭೆಯಲ್ಲಿ ನ್ಯಾಯಮೂರ್ತಿ ಆರುಮುಗಸ್ವಾಮಿ ತನಿಖಾ ಆಯೋಗದ ವರದಿಯನ್ನು ಮಂಡಿಸಲಾಗಿದ್ದು, ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸಹಿತ ನಾಲ್ವರ ವಿರುದ್ದ ತನಿಖೆಗೆ ಆದೇಶಿಸಿದೆ.
ಜಯಲಲಿತಾ ಸಾವು ಸಂಬಂಧಿಸಿ ಶಶಿಕಲಾ, ಡಾ. ಶಿವಕುಮಾರ್, ಅಂದಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಅಂದಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ತಪ್ಪಿತಸ್ಥರು ಎಂದು ಆರುಮುಗಸ್ವಾಮಿ ತನಿಖಾ ಆಯೋಗದ ವರದಿ ಹೇಳಿದೆ. ಹೀಗಾಗಿ ಆಯೋಗದಿಂದ ತನಿಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಇಂದು ಮಂಡನೆಯಾದ ವರದಿಯಲ್ಲಿ ಹೇಳಲಾಗಿದೆ.
ಇನ್ನು ಅಪೋಲೋ ಆಸ್ಪತ್ರೆಗೆ ಏಮ್ಸ್ ವೈದ್ಯರ ತಂಡವು ಐದು ಬಾರಿ ಭೇಟಿ ನೀಡಿದರೂ ಜಯಲಲಿತಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಿರಲಿಲ್ಲ. ಅಮೆರಿಕಾದಿಂದ ಬಂದ ಡಾ. ಸಮೀನ್ ಶರ್ಮಾ ಅವರು ಜಯಲಲಿತಾಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಶಿಫಾರಸ್ಸು ಮಾಡಿದ್ದರು. ಆದರೆ ಅದನ್ನೂ ಮಾಡಲಾಗಿಲ್ಲ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
2012ರ ನಂತರ ಜಯಲಲಿತಾ ಮತ್ತು ಶಶಿಕಲಾರ ಆಪ್ತತೆಯಲ್ಲಿ ಬಿರುಕು ಉಂಟಾಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾದ ಬಳಿಕದ ಎಲ್ಲಾ ಮಾಹಿತಿಗಳನ್ನು ಶಶಿಕಲಾ ಬಹಿರಂಗಗೊಳಿಸಲಿಲ್ಲ. ಅಲ್ಲದೆ, ವೈಯಕ್ತಿಕ ಲಾಭದ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಶಶಿಕಲಾ ತಡೆದಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ವರದಿ ಹೇಳಿದೆ.
ಇದಕ್ಕೂ ಮುನ್ನ ಸಮಿತಿ ವರದಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. 2016ರ ಸೆಪ್ಟೆಂಬರ್ 22ರಂದು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ 2016 ಡಿಸೆಂಬರ್ 5ರಂದು ಅವರು ನಿಧನರಾಗಿದ್ದರು.