ನವದೆಹಲಿ, ಅ 17 (DaijiworldNews/DB): ದುಷ್ಕರ್ಮಿಗಳ ತಂಡವೊಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಎರಡು ಕಾರುಗಳನ್ನು ಧ್ವಂಸಗೊಳಿಸಿದೆ.
ಘಟನೆ ಕುರಿತಂತೆ ಸ್ವತಃ ಸ್ವಾತಿ ಮಲಿವಾಲ್ ಅವರೇ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳ ಹಿಂದೆ ನನ್ನ ಮನೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ಮನೆ ಬಳಿ ನಿಲ್ಲಿಸಿದ್ದ ನನ್ನ ಮತ್ತು ನನ್ನ ತಾಯಿಯ ಕಾರು ಸೇರಿ ಎರಡು ಕಾರುಗಳನ್ನು ಧ್ವಂಸಗೊಳಿಸಿದೆ. ಮನೆಯ ಸುತ್ತ ಗಾಜಿನ ಚೂರುಗಳು ಬಿದ್ದಿದ್ದು, ಮನೆ ಪ್ರವೇಶವೇ ಕಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅದೃಷ್ಟವಶಾತ್ ಈ ಘಟನೆ ವೇಳೆ ನಾನು ಮತ್ತು ತಾಯಿ ಮನೆಯಲ್ಲಿ ಇರಲಿಲ್ಲ. ಒಂದು ವೇಳೆ ನಾವು ಇದ್ದಿದ್ದರೆ ಏನು ಮಾಡುತ್ತಿದ್ದರು ಗೊತ್ತಿಲ್ಲ. ಆದರೆ ಯಾವುದಕ್ಕೂ ನಾನು ಹೆದರಲಾರೆ ಎಂದು ಟ್ವೀಟಿಸಿದ್ದಾರೆ.
ಇನ್ನು ಸ್ವಾತಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ದೆಹಲಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳಾ ಆಯೋಗದ ಅಧ್ಯಕ್ಷರ ಮೇಲೆಯೂ ಇಂತಹ ಕೃತ್ಯಗಳು ನಡೆಯುತ್ತಿವೆಯೆಂದಾದರೆ ಪರಿಸ್ಥಿತಿ ಎಂತ ಮಟ್ಟದಲ್ಲಿರಬಹುದು ಎಂಬುದನ್ನು ಊಹಿಸಿ. ಬಹಿರಂಗ ಕೊಲೆಗಳೂ ರಾಜ್ಯದಲ್ಲಿ ನಡೆಯುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಸಾಹೇಬರು ಕಾನೂನು, ಸುವ್ಯವಸ್ಥೆ ಸುಸ್ಥಿತಿಗಾಗಿ ಸಮಯ ನೀಡುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.