ಮೈಸೂರು, ಅ 17 (DaijiworldNews/DB): ಈಗಿನ ಸಂಸದ ಸ್ಥಾನದ ಅವಧಿ ಮುಗಿದ ಬಳಿಕ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹಿರಿಯ ರಾಜಕೀಯ ಮುತ್ಸದ್ದಿ, ಚಾಮರಾಜ ನಗರ (ಮೀಸಲು) ಸಂಸದ ವಿ. ಶ್ರೀನಿವಾಸಪ್ರಸಾದ್ ಘೋಷಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಈ ಘೋಷಣೆ ಮಾಡಿದ ಅವರು, ಈ ಬಾರಿ ಸಂಸದ ಸ್ಥಾನದ ಅವಧಿ ಮುಗಿಯುವುದರೊಂದಿಗೆ ನನ್ನ ಚುನಾವಣಾ ರಾಜಕೀಯಕ್ಕೆ ಐದು ದಶಕಗಳಾಗಲಿವೆ. ಆರೋಗ್ಯ ಸರಿಯಿಲ್ಲದ ಕಾರಣ ಮುಂದಿನ ದಿನಗಳಲ್ಲಿ ರಾಜಕಾರಣ ಮಾಡಲು ಆಗುವುದಿಲ್ಲ ಎಂದರು.
ಈವರೆಗೆ 14 ಬಾರಿ ಚುನಾವಣೆಗೆ ಸ್ಪಧಿಸಿದ್ದು, ಅದರಲ್ಲಿ 11 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದವರು ಇದೇ ವೇಳೆ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ದಲಿತರು ಇನ್ನೂ ಪ್ರತ್ಯೇಕ ಕಾಲೊನಿಗಳಲ್ಲಿ ವಾಸಿಸುತ್ತಿದ್ದಾರೆ. ಎಲ್ಲರೊಳಗೂಡಿ ಸಾಮಾಜಿಕವಾಗಿ ವಾಸಿಸಲು ವಾಸಿಸಲು ದಲಿತರಿಗೆ ಸಾಧ್ಯವಾಗದಿರುವುದು ವಿಪರ್ಯಾಸ. ಕತ್ತಲಿನಲ್ಲಿದ್ದ ನಮಗೆ ಬೆಳಕು ನೀಡಿ ಮಾರ್ಗದರ್ಶಕರಾಗಿದ್ದವರು ಅಂಬೇಡ್ಕರ್ ಅವರು ಎಂದು ಅಭಿಪ್ರಾಯಪಟ್ಟರು.
ಸದಾ ಶೋಷಣೆ, ಅವಮಾನಗಳಿಗೆ ಒಳಗಾದ ದಲಿತರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಸ್ಪೃಶ್ಯತೆ, ಅಸಮಾನತೆ ಮಾನಸಿಕ ಕಾಯಿಲೆಯಂತೆ ಈ ಸಮಾಜದಲ್ಲಿ ಕಾಡುತ್ತಿದೆ. ಹುಚ್ಚರ ಸಂತೆಯಂತಿರುವ ಈ ದೇಶದಲ್ಲಿ ಇಂತಹವರ ನಡುವೆ ಇದ್ದು ಜಯಿಸಬೇಕೆಂಬ ನಂಬಿಕೆಯೊಂದಿಗೆ ನಾವು ಬದುಕುತ್ತಿದ್ದೇವೆ ಎಂದರು.