ಗೋವಾ, ಅ 17 (DaijiworldNews/DB): ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಬೇಕು ಎಂದು ಗೋವಾದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಸಂಸದ ಫ್ರಾನ್ಸಿಸ್ಕೊ ಸರ್ಡಿನಾಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಹೀಗಾಗಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಚುನಾವಣಾ ಪ್ರಚಾರ ಅಗತ್ಯವಾಗಿದೆ. ಭಾರತ್ ಹೋಡೋ ಯಾತ್ರೆ ನಿಲ್ಲಿಸಿ ಈ ಎರಡು ರಾಜ್ಯಗಳಿಗೆ ತೆರಳಿ ರಾಹುಲ್ ಚುನಾವಣಾ ಪ್ರಚಾರ ಕೈಗೊಳ್ಳಬೇಕು ಎಂದರು.
ಸಾರ್ವಜನಿಕರಿಗೆ ದೇಶದ ವಾಸ್ತವ ಸಮಸ್ಯೆಗಳನ್ನು ಮನದಟ್ಟು ಮಾಡುವ ಅವಶ್ಯಕತೆ ಬಹಳ ಇದೆ. ಹೀಗಾಗಿ ಜನರನ್ನು ಜಾಗೃತಗೊಳಿಸಲು ರಾಹುಲ್ ಅವರು ಆ ರಾಜ್ಯಗಳಿಗೆ ಭೇಟಿ ನೀಡಬೇಕು. ಜನರೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್ಗೆ ಮತ ನೀಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ್ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ಸೆ.7ರಂದು ಚಾಲನೆ ದೊರೆತಿತ್ತು. ಈಗಾಗಲೇ ತಮಿಳುನಾಡು, ಕೇರಳದಲ್ಲಿ ಮುಗಿದು, ಕರ್ನಾಟಕದಲ್ಲಿ ಯಾತ್ರೆ ಸಾಗುತ್ತಿದೆ. ಜಮ್ಮುವಿನಲ್ಲಿ ಯಾತ್ರೆ ಅಂತ್ಯವಾಗಲಿದೆ. ಇದಕ್ಕೂ ಮೊದಲು ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.