ಬಳ್ಳಾರಿ, ಅ 17 (DaijiworldNews/DB): ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾವೇಶ ನಡೆದ ಜಾಗದಲ್ಲಿ ಬಿದ್ದಿದ್ದ ಕಸವನ್ನು ಸಚಿವ ಶ್ರೀರಾಮುಲು, ಬಳ್ಳಾರಿ ನಗರ ಶಾಸಕರ ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಂಸದೆ ಜೆ. ಶಾಂತಾ ಸೇರಿದಂತೆ ಹಲವರು ಸೇರಿ ಸ್ವಚ್ಚಗೊಳಿಸಿದರು.
ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಅಕ್ಟೋಬರ್ 15ರಂದು ಕಾಂಗ್ರೆಸ್ನ ಬೃಹತ್ ಸಮಾವೇಶ ನಡೆದಿತ್ತು. ಸಮಾವೇಶದ ನಂತರ ಮೈದಾನದಲ್ಲಿ ಕಸದ ರಾಶಿ ಬಿದ್ದಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಸಚಿವ ಶ್ರೀರಾಮುಲು ಸಹಿತ ನಾಯಕರು ಕಸ ಗುಡಿಸಿ ಸ್ವಚ್ಚಗೊಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ನವರು ಮೈದಾನದಲ್ಲಿ ಹೊಲಸು ಮಾಡಿದ್ದಾರೆ. ಆದರೆ ಸೋಮವಾರ ಕಾಲೇಜಿನಲ್ಲಿ ತರಗತಿ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಮತ್ತು ರಾಜಕಾರಣಿಗಳ ಬಗ್ಗೆ ಅವರಲ್ಲಿ ಕೆಟ್ಟ ಅಭಿಪ್ರಾಯ ಮೂಡಬಾರದೆಂಬ ಕಾರಣಕ್ಕಾಗಿ ಸ್ವಚ್ಚತೆ ಮಾಡಲಾಗಿದೆ. ಪ್ರಧಾನಿಯವರ ಸ್ವಚ್ಚ ಭಾರತ್ ಅಭಿಯಾನದ ಭಾಗವಾಗಿ ಈ ಕೆಲಸ ನಮ್ಮಿಂದ ಆಗಿದೆ. ಕಸ ಹಾಕಿದ ಅವರೇ ಈ ಕೆಲಸ ಮಾಡಬೇಕಿತ್ತು. ಆದರೆ ನಾವು ಮಾಡಿದ್ದೇವೆ ಎಂದರು.
ಬಳಿಕ ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಚಿವ ಶ್ರೀರಾಮುಲು, ಶನಿವಾರ ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದು ವೀರಾವೇಶದ ಮಾತುಗಳನ್ನಾಡಿದ್ದ ಕಾಂಗ್ರೆಸ್ ನಾಯಕರಿಗೆ ಕನಿಷ್ಟ ಪಕ್ಷ ತಾವು ಮಾಡಿದ್ದ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇದ್ದಂತೆ ಕಾಣಲಿಲ್ಲ. ಸ್ವತಃ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ಸ್ವಚ್ಛಗೊಳಿಸುವ ಮೂಲಕ ಕೈ ಕೊಳಕನ್ನು ತೆಗೆದು ಹಾಕಿದೆವು ಎಂದಿದ್ದಾರೆ.
ದೇಶ ಜೋಡಿಸುತ್ತೇನೆ ಎಂದು ಕೇವಲ ಪಾದಯಾತ್ರೆ ನಡೆಸಿದರೆ ಸಾಲದು. ರಾಹುಲ್ ಗಾಂಧಿ ಅವರೇ. ಭಾರತವನ್ನು ನೀವು ಬೇಸೆಯುವ ಯತ್ನ ಮಾಡಿ. ನಮ್ಮದೇನು ಅಭ್ಯಂತರ ಇಲ್ಲ. ಆದರೆ, ನೀವೇ ನಿಂತು ಅಬ್ಬರಿಸಿ ಬೊಬ್ಬಿರಿಸಿದ ಸ್ಥಳವನ್ನು ಸ್ವಚ್ಛಗೊಳಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಕಿವಿ ಮಾತು ಹೇಳದಿದ್ದರೆ, ನಿಮ್ಮ ಪಾದಯಾತ್ರೆಯ ಸದುದ್ದೇಶ ಈಡೇರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.