ಸುಲ್ತಾನ್ಪುರ, ಅ 17 (DaijiworldNews/DB): ಸುಲ್ತಾನ್ಪುರದ ಬಳಿ ಕಳೆದ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ನಾಲ್ವರು ತಮ್ಮ ಸಾವಿನ ಕುರಿತು ಫೇಸ್ಬುಕ್ನಲ್ಲಿ ಕೆಲವು ಕ್ಷಣಗಳ ಹಿಂದಷ್ಟೇ ಲೈವ್ ಮಾಡಿ ಹೇಳಿದ್ದರು! ಆದರೆ ತಮಾಷೆಗಾಗಿ ಆಡಿದ ಮಾತು ನಿಜವೇ ಆಗಿ ಬಿಡುತ್ತದೆ ಎಂಬುದು ಅವರಾರಿಗೂ ತಿಳಿದಿರಲಿಲ್ಲ.
ಸುಲ್ತಾನ್ ಪುರದ ಬಳಿ ಪೂರ್ವಾಚಲ್ ಎಕ್ಸ್ ಪ್ರೆಸ್ ವೇನಲ್ಲಿ ಕಳೆದ ಶುಕ್ರವಾರ ಬಿಎಂಡಬ್ಲ್ಯೂ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಟೆಕ್ಕಿ, ವೈದ್ಯ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಬಿಹಾರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕ ಡಾ. ಆನಂದ ಪ್ರಕಾಶ್ ದೆಹಲಿಯ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಕರೊಬ್ಬರಿಂದ ಇತ್ತೀಚೆಗಷ್ಟೇ ಐಷಾರಾಮಿ ಬಿಎಂಡಬ್ಲ್ಯೂ ಕಾರು ಖರಿಈದಿಸಿದ್ದು, ಇದೇ ಕಾರಿನಲ್ಲಿ ಸ್ನೇಹಿತರಾದ ದೀಪಕ್ ಕುಮಾರ್, ಅಖಿಲೇಶ್ ಸಿಂಗ್ ಹಾಗೂ ಮುಕೇಶ್ ಎಂಬವರೊಂದಿಗೆ ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದರು. ಈ ವೇಳೆ ನಾಲ್ವರೂ ಕಾರಿನಲ್ಲಿ ಪ್ರಯಾಣಿಸುತ್ತಲೇ ಫೇಸ್ಬುಕ್ ಲೈವ್ ಮಾಡಿದ್ದು, ನಮ್ಮ ಕಾರು 230 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ಇದು 300 ಕಿಲೋ ಮೀಟರ್ ತಲುಪಲಿದೆ ಎಂದಿದ್ದರು. ಈ ವೇಳೆ ಓರ್ವ ಪ್ರಯಾಣಿಕರ ಇನ್ನೂ ವೇಗದಲ್ಲಿ ಹೋದರೆ ನಾವು ನಾಲ್ವರೂ ಸಾಯುತ್ತೇವೆ ಎಂದು ತಮಾಷೆಗಾಗಿ ಹೇಳಿದ್ದ. ಆದರೆ ಈ ತಮಾಷೆಯ ಮಾತೇ ನಿಜವಾಗಿದ್ದು, ಕೆಲವೇ ಕ್ಷಣಗಳಲ್ಲಿ ಇವರಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ನಾಲ್ವರೂ ಮೃತಪಟ್ಟಿದ್ದಾರೆ.
ಮೃತರೆಲ್ಲರೂ 35 ವರ್ಷದ ಆಸುಪಾಸಿನವರಾಗಿದ್ದರು. ಎಲ್ಲರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದು ಅಪಘಾತದ ಭೀಕರತೆಯನ್ನು ತೋರಿಸುವಂತಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.