ಬೆಂಗಳೂರು, ಅ 17 (DaijiworldNews/DB): ಬಂಗಾಳಕೊಲ್ಲಿಯ ಕರಾವಳಿ ಭಾಗಕ್ಕೆ ಅಕ್ಟೋಬರ್ 18ಕ್ಕೆ ಸೂಪರ್ ಸೈಕ್ಲೋನ್ ಅಪ್ಪಳಿಸಲಿದೆ ಎಂಬ ವಿಚಾರವನ್ನು ಭಾರತೀಯ ಹವಾಮಾನ ಇಲಾಖೆ ತಳ್ಳಿ ಹಾಕಿದೆ. ಇದು ಕೇವಲ ವದಂತಿಯಷ್ಟೇ ಎಂದು ಇಲಾಖೆ ತಿಳಿಸಿದೆ.
ಭಾರತದ ಬಂಗಾಳಕೊಲ್ಲಿ ಕರಾವಳಿ ಭಾಗಕ್ಕೆ 'ಸೀತ್ರಾಂಗ' ಸೂಪರ್ ಸೈಕ್ಲೋನ್ ಅಪ್ಪಳಿಸಲಿದೆ ಎಂದು ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಹವಾಮಾನ ವಿಷಯದ ಪಿಎಚ್ಡಿ ವಿದ್ಯಾರ್ಥಿ ಹೇಳಿದ್ದ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಅಂಫಾನ್ ಚಂಡಮಾರುತದ ಪರಿಣಾಮವನ್ನೇ ಈ ಚಂಡಮಾರುತವೂ ಉಂಟು ಮಾಡಲಿವೆ ಎಂದೂ ಹೇಳಲಾಗಿತ್ತು. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದ್ದು, ಅಕ್ಟೋಬರ್ 18ರಂದು ಬಂಗಾಳಕೊಲ್ಲಿ ಕರಾವಳಿಯಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸುವುದಿಲ್ಲ. ಇದು ಕೇವಲ ವದಂತಿ ಮತ್ತು ಈ ಕುರಿತು ಇಲಾಖೆ ಯಾವುದೇ ಮಾಹಿತಿಗಳನ್ನು ಹಬ್ಬಿಸಿಲ್ಲ ಎಂದು ತಿಳಿಸಿದೆ.
ಅಕ್ಟೋಬರ್ 18ರ ನಂತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣ ಕಂಡು ಬರುವ ಸಾಧ್ಯತೆಯಿದ್ದು, ಬಳಿಕ ಅದು ಬಂಗಾಳಕೊಲ್ಲಿಯೆಡೆಗೆ ಚಲಿಸಿ ಅಕ್ಟೋಬರ್ 20ರ ದುರ್ಬಲಗೊಳ್ಳಲಿದೆ. ಸೂಪರ್ ಸೈಕ್ಲೋನ್ ಮುನ್ನೆಚ್ಚರಿಕೆ ಸದ್ಯಕ್ಕೆ ಇಲ್ಲ. ಒಂದು ವೇಳೆ ಸೂಪರ್ ಸೈಕ್ಲೋನ್ ಉಂಟಾದಲ್ಲಿ ಮೂರು ದಿನ ಮೊದಲೇ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದ ಸುಂದರಬನ್ಸ್ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತವನ್ನು ಉಂಟು ಮಾಡುತ್ತದೆ. ಒಂದು ವೇಳೆ ಅಪ್ಪಳಿಸಿದ್ದಲ್ಲಿ ಸಮುದ್ರದಲ್ಲಿ 15ರಿಂದ 20 ಅಡಿ ಎತ್ತರದಷ್ಟು ಅಲೆ ಉಂಟಾಗಬಹುದು. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಇಲಾಖೆ ವಿವರಿಸಿದೆ.
ಇನ್ನು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಾರದಿದ್ದರೂ ಚಂಡಮಾರುತ ಎದುರಿಸಲು ಸನ್ನದ್ದರಾಗುವಂತೆ ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸ್ವಯಂಸೇವಕರಿಗೆ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.