ಭೋಪಾಲ್, ಅ 17 (DaijiworldNews/DB): ಪ್ರಿಯತಮೆಯನ್ನು ಕಾಣಲು ಆಕೆಯ ಮನೆಗೆ ತೆರಳಿದ್ದ ಟೆಕ್ಕಿಯೊಬ್ಬನನ್ನು ಆಕೆಯ ಮನೆಯವರು ಮತ್ತು ಬರುವ ಔಷಧ ನೀಡಿ ಬೆದರಿಸಿ ಯುವತಿಯೊಂದಿಗೆ ಮದುವೆ ಮಾಡಿಸಿ 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಘಟನೆ ಭೋಪಾಲ್ನಲ್ಲಿ ನಡೆದಿದೆ.
ಗೂಗಲ್ ಇಂಡಿಯಾದ ಹಿರಿಯ ಮ್ಯಾನೇಜರ್ ಮಧ್ಯಪ್ರದೇಶ ಭೋಪಾಲ್ ಮೂಲದ ಗಣೇಶ್ ಶಂಕರ್ ಎಂಬವರೇ ಮೋಸ ಹೋದವರು. ಶಿಲ್ಲಾಂಗ್ನ ಐಐಎಂನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವೇಳೆ ಭೋಪಾಲ್ನ ಸುಜಾತ ಎಂಬಾಕೆಯೊಂದಿಗೆ ಗಣೇಶ್ಗೆ ಪ್ರೇಮಾಂಕುರವಾಗಿತ್ತು. ಬಳಿಕ ಐದು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿದ್ರು. ಇತ್ತೀಚೆಗೆ ಪ್ರಿಯತಮೆಯನ್ನು ಭೇಟಿಯಾಗಲು ಗಣೇಶ್ ಆಕೆಯ ಮನೆಗೆ ಹೋಗಿದ್ದು, ಒಂದೆರಡು ದಿನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಬಳಿಕ ಆಕೆಯ ಮನೆಯವರು ಗಣೇಶ್ಗೆ ಮತ್ತು ಬರುವ ಔಷಧಿ ನೀಡಿ ಕತ್ತಲು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಅಲ್ಲದೆ, ಬೆದರಿಸಿ ಸುಜಾತಾಳೊಂದಿಗೆ ಮದುವೆ ಮಾಡಿಸಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಇದಾದ ಬಳಿಕ 40 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟುದ್ದು, ಹಣ ನೀಡದೇ ಇದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪ್ರಿಯತಮೆಯ ಮನೆಯವರ ಬೆದರಿಕೆಯಿಂದ ಆತಂಕಗೊಂಡ ಗಣೇಶ್ ಭೂಪಾಲ್ನ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಯುವತಿ ಸುಜಾತ, ತಂದೆ ಕಮಲೇಶ್ ಸಿಂಗ್, ಸಹೋದರರಾದ ಶೈವೇಶ್ ಸಿಂಗ್, ವಿಜೇಂದ್ರ ಕುಮಾರ್ ವಿರುದ್ದಐಪಿಸಿ ಸೆಕ್ಷನ್ 294, 323, 342, 384, 506 ಮತ್ತು 34ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಈ ನಡುವೆ ಟೆಕ್ಕಿ ಗಣೇಶ್ ಬೇರೆ ಯುವತಿಯನ್ನು ಈ ಹಿಂದೆ ಮದುವೆಯಾಗಿದ್ದು, ತಮ್ಮ ಮಗಳಿಗೆ ಮೋಸ ಮಾಡಿರುವುದಾಗಿ ಯುವತಿ ಪೋಷಕರು ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂದು ಭೋಪಾಲ್ ಕಮಲಾ ನಗರ ಪೊಲೀಸ್ ಠಾಣೆ ಅಧಿಕಾರಿ ಅನಿಲ್ ಕುಮಾರ್ ವಾಜಪೇಯಿ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.