ಬೆಂಗಳೂರು, ಅ 16 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಸೂತ್ರ ಭಾರತವನ್ನು ಮುಂದೆ ಯಶಸ್ವಿ ರಾಷ್ಟ್ರವೆಂಬ ಹೆಗ್ಗಳಿಕೆಗೆ ಕೊಂಡೊಯ್ಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಕೆ.ಎಲ್.ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಭಾನುವಾರ ನಡೆದ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹ-ಸಂಚಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಕ್ತದಲ್ಲಿರುವ ಗುಲಾಮಗಿರಿ ಅಂಶಗಳನ್ನು ಕಿತ್ತೊಗೆದು ದೇಶದ ಆಡಳಿತ ಪರಿಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಭಾಷ್ಯ ಬರೆಯುತ್ತಿದ್ದಾರೆ. ದಾಸ್ಯದ ಗುರುತು ಸಂಪೂರ್ಣ ತೊಲಗಿ ಯಶಸ್ವಿ ರಾಷ್ಟ್ರ ನಮ್ಮದಾಗಬೇಕೆಂಬುದೇ ಅವರ ಹೆಬ್ಬಯಕೆ. ಇದು ಕೇವಲ ಹಿಂದೂ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ, ಇಡೀ ದೇಶವಾಸಿಗಳಿಗೆ ಸಂಬಂಧಿಸಿದ್ದಾಗಿದೆ. ಸರ್ವಸ್ಪರ್ಶಿ- ಸರ್ವ ವ್ಯಾಪಿ, ಸರ್ವವೇದ್ಯದಿಂದಲೇ ಸರ್ವ ಯಶಸ್ಸು ಎಂದವರು ತಿಳಿಸಿದರು.
ಜಾಗತಿಕ ನಾಯಕರಾಗಿ ಮೋದಿ ಗುರುತಿಸಿಕೊಂಡಿದ್ದಾರೆ. ಜನಾಶೀರ್ವಾದ ಗಳಿಸುವಲ್ಲಿ ಇಂದಿರಾ ಗಾಂಧಿ, ವಿ.ಪಿ. ಸಿಂಗ್ ಅವರಿಗಿಂತಲೂ ಮುಂದಿದ್ದಾರೆ. ಮೋದಿಯವರ ವ್ಯಕ್ತಿತ್ವ, ನಡವಳಿಕೆ, ದೇಶಪ್ರೇಮದ ಮೂಲಕ ರೂಪಿಸಿದ ಸೈದ್ದಾಂತಿಕ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದರು.
ಜಾತಿಗಿಂತ ನೀತಿ ಮೇಲು ಎಂಬ ಚಿಂತನೆ ಅನುಷ್ಠಾನಗೊಂಡಾಗ ಯಶಸ್ವಿ ದೇಶ ನಿರ್ಮಾಣ ಸಾಧ್ಯ. ರಾಜಕೀಯದಲ್ಲಿ ಜಾತಿಗೆ ಒತ್ತು ಕೊಟ್ಟಷ್ಟು ದೇಶ ಬಲಿಷ್ಠವಾಗುವುದು ತಪ್ಪುತ್ತದೆ. ಆದರೆ ಇದೇ ಆಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಜಾತಿಗೆ ಮಣೆ ಹಾಕುವ ಸಂಪ್ರದಾಯದಿಂದ ರಾಜಕೀಯ ಶೀಘ್ರ ಹೊರ ಬರುವಂತಾಗಲಿ ಎಂದು ಇದೇ ವೇಳೆ ಡಿ.ವಿ. ಸದಾನಂದ ಗೌಡ ಆಶಿಸಿದರು.