ಕೊಡಗು, ಅ 16 (DaijiworldNews/DB): ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಇಡೀ ನಗರ ಸುಟ್ಟು ಭೀತಿ ಸೃಷ್ಟಿಸಿದರೆ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಹಿಂದೂಗಳೇ ಹೇಳುತ್ತಾರೆಂಬುದಾಗಿ ಮಾತನಾಡಿದ ಆರೋಪದ ಮೇಲೆ ಮಡಿಕೇರಿ ನಗರಸಭಾ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ನಗರಸಭಾ ಸದಸ್ಯ, ಜೆಡಿಎಸ್ನ ಮುಸ್ತಾಫ ಬಂಧಿತ ಆರೋಪಿ. ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕಿ ಭೀತಿ ಸೃಷ್ಟಿಸಬೇಕು ಎಂದು ಈತ ಈತನ ಸ್ನೇಹಿತ, ಉದ್ಯಮಿ ಅಬ್ದುಲ್ಲಾ ಎಂಬಾತನೊಂದಿಗೆ ಮಾತುಕತೆ ನಡೆಸಿದ್ದ ಬಗ್ಗೆ ದೂರು ಸ್ವೀಕರಿಸಲಾಗಿತ್ತು. ಅಲ್ಲದೆ, ಈ ಮಾತುಕತೆ ಸಂಬಂಧ ಆಡಿಯೋ ಸಾಕ್ಷ್ಯ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮಡಿಕೇರಿ ಪೆನ್ಷನ್ ಲೈನ್ ನಿವಾಸಿ ಶೇಷಪ್ಪ ರೈ ಎಂಬುವವರು ಕೆಲಸದ ನಿಮಿತ್ತ ಅಬ್ದುಲ್ಲ ಅವರಿಗೆ ಏಪ್ರಿಲ್ 23ರಂದು ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಲು ನಿರಾಕರಿಸಿದ ಅಬ್ದುಲ್ಲ ಕಟ್ ಮಾಡಲು ಹೋಗಿ ಅರಿವಿಲ್ಲದೆ ಕರೆ ಸ್ವೀಕರಿಸಿದ್ದಾರೆ. ಇತ್ತ ಕರೆ ಸ್ವೀಕಾರವಾಗಿರುವ ಅರಿವಿಲ್ಲದೆ ಅಬ್ದುಲ್ಲ ಮತ್ತು ಮುಸ್ತಾಫ ಸುಮಾರು ಮೂರು ನಿಮಿಷ ಕಾಲ ಮಾತನಾಡಿದ್ದು, ಮಡಿಕೇರಿಯ 50 ಕಡೆ ಪೆಟ್ರೋಲ್ ಬಾಂಬ್ ಹಾಕಬೇಕು. ಆ ಮೂಲಕ ಇಡೀ ಮಡಿಕೇರಿ ಹೊತ್ತು ಉರಿಸಬೇಕು. ಇದಕ್ಕಾಗಿ 50 ಮಂದಿಯ ತಂಡ ಮಾಡಬೇಕು. ಅವರೆಲ್ಲರೂ 50 ಸಾವಿರದಿಂದ 1 ಲಕ್ಷ ರೂ.ಗಳವರೆಗೆ ಹಾಕಿದರೆ ಕೆಲಸ ಸಲೀಸಾಗುತ್ತದೆ. ಬಿಜೆಪಿಯವರು ಮುಂದೆ ಚುನಾವಣೆಗೆ ನಿಲ್ಲಲೂ ಹೆದರುವಂತಾಗಬೇಕು ಎಂದು ಮುಸ್ತಾಫ ಅಬ್ದುಲ್ಲ ಎಂಬಾತನ ಬಳಿ ಹೇಳಿದ್ದಾರೆ.
ಅಬ್ದುಲ್ಲ ಅವರು ಫೋನ್ ಕರೆ ಕಟ್ ಮಾಡಲು ಹೋಗಿ ತಿಳಿಯದೇ ಕರೆ ಸ್ವೀಕರಿಸಿದ್ದರಿಂದ ಶೇಷಪ್ಪ ರೈ ಆ ಕಡೆಯಿಂದ ಕರೆ ಕಟ್ ಮಾಡದೇ ಹಾಗೆಯೇ ಹಿಡಿಕೊಂಡಿದ್ದರು. ಅಲ್ಲದೆ, ಇವರಿಬ್ಬರ ಸಂಭಾಷಣೆಯನ್ನು ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಶೇಷಪ್ಪ ಇಬ್ಬರ ವಿರುದ್ದ ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.