ಬಿಹಾರ, ಅ 16 (DaijiworldNews/DB): ದೋಣಿ ಮುಳುಗಿ ಏಳು ಮಂದಿ ಕೃಷಿ ಕಾರ್ಮಿಕರು ಮೃತಪಟ್ಟ ಘಟನೆ ಬಿಹಾರದಲ್ಲಿ ಗಂಗಾನದಿ ಮತ್ತು ಅದರ ಉಪನದಿಗಳ ಸಂಗಮ ಸ್ಥಳದಲ್ಲಿ ನಡೆದಿದೆ.
ಹತ್ತು ಮಂದಿ ಕೃಷಿ ಕಾರ್ಮಿಕರು ಕೆಲಸದಿಂದ ದೋಣಿಯಲ್ಲಿ ಹಿಂತಿರುಗುತ್ತಿದ್ದರು. ಶನಿವಾರ ತಡರಾತ್ರಿ ಕಾರ್ಮಿಕರನ್ನು ಹೊತ್ತು ತರುತ್ತಿದ್ದ ದೋಣಿ ಗಂಗಾ ಮತ್ತು ಬಾರಾಂಡಿಯ ಸಂಗಮದಲ್ಲಿ ಮುಳುಗಿದೆ. ದೋಣಿಯಲ್ಲಿದ್ದ ಹತ್ತು ಮಂದಿ ಜಲಸಮಾಧಿಯಾದರೆ, ಉಳಿದ ಮೂವರು ಈಜಿ ದಡ ಸೇರಿದ್ದಾರೆ ಎಂದು ಕತಿಹಾರ್ನ ಜಿಲ್ಲಾಧಿಕಾರಿ ಉಜ್ಜಯಿನಿ ಮಿಶ್ರಾ ತಿಳಿಸಿರುವುದಾಗಿ ವರದಿಯಾಗಿದೆ.
ನಾಪತ್ತೆಯಾಗಿದ್ದ ಏಳು ಮಂದಿಗಾಗಿ ಎನ್ಡಿಆರ್ಎಫ್ ಸಿಬಂದಿ ಸಹಾಯದೊಂದಿಗೆ ಸ್ಥಳೀಯ ಜೀವರಕ್ಷಕರು ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದರು. ಬಳಿಕ ಎಲ್ಲಾ ಮೃತದೇಹಗಳನ್ನು ದಡಕ್ಕೆ ತರಲಾಯಿತು. ಘಟನೆ ಬಗ್ಗೆ ಬಿಹಾರ ಸಿಎಂ ನಿತೀಶ್ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.