ನವದೆಹಲಿ, ಅ 16 (DaijiworldNews/DB): 'ನೋಡುತ್ತಿರಿ..ನಾಳೆ ಸಿಬಿಐನಿಂದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ ಪಕ್ಕಾ..' ಹೀಗೆಂದು ಹೇಳಿದವರು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್.
ದೆಹಲಿ ನೂತನ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ದೆಹಲಿ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿಯಾಗಿದ್ದ ಮನೀಷ್ ಸಿಸೋಡಿಯಾ ಅವರಿಗೆ ಸೋಮವಾರ (ಅ.17) ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಭಾರದ್ವಾಜ್, ಗುಜರಾತ್ನಲ್ಲಿ ಶೀಘ್ರ ಚುನಾವಣೆಯಿದ್ದು, ಅಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷ ತೀವ್ರ ಪ್ರತಿಸ್ಪರ್ಧಿಯಾಗಿದೆ. ಇದರಿಂದ ಬಿಜೆಪಿ ಭಯಗೊಂಡಿದ್ದು, ಎಎಪಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ನಾಳೆ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸುವುದು ಪಕ್ಕಾ ಎಂದರು.
ಇನ್ನು ಸಿಬಿಐ ನೀಡಿರುವ ಸಮನ್ಸ್ ಕುರಿತು ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಈವರೆಗೆ ಆರೋಪ ಕೇವಲ ಆರೋಪವಾಗಿಯೇ ಉಳಿದಿದೆಯೇ ಹೊರತು ಇಲ್ಲಿವರೆಗೆ ಸಿಬಿಐ ನಡೆಸಿದ ದಾಳಿಯಲ್ಲಿ ಯಾವುದೇ ಸಾಕ್ಷ್ಯ ಅವರಿಗೆ ಸಿಕ್ಕಿಲ್ಲ. 14 ಗಂಟೆ ಕಾಲ ನನ್ನ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಡಿ ವಾಪಾಸ್ ಹೋಗಿದ್ದಾರೆ. ಬ್ಯಾಂಕ್ ಲಾಕರ್, ಹಳ್ಳಿಗೂ ಹೋಗಿ ದಾಳಿ ಮಾಡಿ ಹುಡುಕಿದ್ದಾರೆ. ಆದರೆ ಹಣವಾಗಲೀ, ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಾಧಾರಗಳಾಗಲೀ ಸಿಕ್ಕಿಲ್ಲ. ಈಗ ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ. ಆದರೆ ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದಿದ್ದಾರೆ.