ಹುಬ್ಬಳ್ಳಿ, ಅ 16 (DaijiworldNews/DB): ಪಕ್ಷದ ಕೋರ್ ಕಮಿಟಿಯಲ್ಲಿ ಯತ್ನಾಳ್ ಇಲ್ಲ. ಹೀಗಾಗಿ ಅವರ ಹೇಳಿಕೆಗಳು ಪಕ್ಷದ ಹೇಳಿಕೆ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಪಕ್ಷೀಯರ ವಿರುದ್ದ ಹೇಳಿಕೆ ನೀಡುವ ಕಾರಣ ಯತ್ನಾಳ್ಗೆ ನೋಟಿಸ್ ಜಾರಿ ಮಾಡಿ ಉತ್ತರ ಪಡೆದಿದ್ದೇವೆ. ಆದರೆ ಅವರ ಅದು ಅವರ ಸ್ವಭಾವ, ಅವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸುತ್ತೇವೆ. ಅವರು ಪಕ್ಷದ ಕೋರ್ ಕಮಿಟಿ ಸದಸ್ಯರಲ್ಲದ ಕಾರಣ ಅವರ ಹೇಳಿಕೆ ಪಕ್ಷದ ಹೇಳಿಕೆಯಾಗುವುದಿಲ್ಲ. ಅಲ್ಲದೆ ಪಕ್ಷದ ಅಭಿಪ್ರಾಯವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವುದಲ್ಲ, ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆ ಅದು. ಇಡೀ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಯವರನ್ನು ಜೋಡಿಸುವುದೇ ರಾಹುಲ್ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ, ಡಿಕೆಶಿ ನಡುವಿನ ಕಿತ್ತಾಟದಿಂದಾಗಿ ಐದು ನಿಮಿಷವೂ ಒಗ್ಗಟ್ಟಿನಿಂದರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರಿಬ್ಬರನ್ನು ಜೋಡಿಸುವ ಪ್ರಯತ್ನದಲ್ಲಿ ಭಾರತ್ ಜೋಡೋ ಯಾತ್ರ ಪ್ಲಾಪ್ ಆಗಿದೆ ಎಂದರು.