ಚಂಡೀಗಢ, ಅ 16 (DaijiworldNews/DB): ಅಧಿಕಾರಿಯೊಬ್ಬರಿಗೆ 50 ಲಕ್ಷ ರೂ.ಗಳ ಆಮಿಷವೊಡ್ಡಿ ತನ್ನ ವಿರುದ್ದದ ಪ್ರಕರಣ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಪಂಜಾಬ್ನ ಮಾಜಿ ಸಚಿವ ಸುಂದರ್ ಶ್ಯಾಮ್ ಅರೋರಾ ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೊ ಭಾನುವಾರ ಬಂಧಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಅರೋರಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕೆಂದು ವಿಜಿಲೆನ್ಸ್ ಅಧಿಕಾರಿಗೆ ಅರೋರಾ ದುಂಬಾಲು ಬಿದ್ದಿದ್ದರು. ಅಲ್ಲದೆ, ಇದಕ್ಕಾಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ಅಧಿಕಾರಿಗೆ ಆಮಿಷವೊಡ್ಡಿದ್ದರು. ಆದರೆ ಇದೇ ಅವರಿಗೆ ಮುಳುವಾಗಿದ್ದು, ಆಮಿಷವೊಡ್ಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ವಿಜಿಲೆನ್ಸ್ ಬ್ಯೂರೊದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್, ಅರೋರಾ ಪ್ರಕರಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಹಾಯಕ ಇನ್ಸ್ಪೆಕ್ಟರ್ ಜನರಲ್ ಮನಮೋಹನ್ ಶರ್ಮಾ ಅವರಿಗೆ ತನ್ನ ಮೇಲಿರುವ ಪ್ರಕರಣ ಇತ್ಯರ್ಥಗೊಳಿಸಬೇಕೆಂದು ಅರೋರಾ ಕೋರಿದ್ದರು. ಇದಕ್ಕಾಗಿ 1 ಕೋಟಿ ರೂ. ಆಮಿಷವೊಡ್ಡಿದ್ದರು. ಬಳಿಕ ಮೊದಲ ಕಂತಾಗಿ 50 ಲಕ್ಷ ರೂ. ನಗದು ಹೊಂದಿರುವ ಬ್ಯಾಗ್ನ್ನು ಅಧಿಕಾರಿಗೆ ಹಸ್ತಾಂತರಿಸುತ್ತಿದ್ದ ವೇಳೆಯಲ್ಲಿ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿರುವುದಾಗಿ ವರದಿಯಾಗಿದೆ.