ನವದೆಹಲಿ, ಅ 16 (DaijiworldNews/DB): ಸಮಾರಂಭವೊಂದರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಪಶ್ಚಿಮ ದೆಹಲಿ ಬಿಜೆಪಿ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ವರ್ಮಾ ವಿರುದ್ದ ಸ್ವತಃ ಬಿಜೆಪಿ ಪಕ್ಷದ ವರಿಷ್ಠರೇ ಅಸಮಾಧಾನಗೊಂಡಿದ್ದಾರೆ.
ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ವಿಶ್ವ ಹಿಂದು ಪರಿಷತ್ನಿಂದ ನಡೆದಿದ್ದ ಸಮಾರಂಭದಲ್ಲಿ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ವರ್ಮಾ ಮಾತನಾಡುತ್ತಾ, ಮುಸ್ಲಿಂ ಸಮುದಾಯದ ಹೆಸರೆತ್ತದೆ ಪರೋಕ್ಷವಾಗಿ ಆ ಸಮುದಾಯವನ್ನು ಟೀಕಿಸಿದ್ದರು. ಅವರನ್ನು ಎಲ್ಲಾ ವಿಚಾರದಲ್ಲೂ ಬಹಿಷ್ಕರಿಸಬೇಕು, ಆ ಒಂದು ಸಮುದಾಯದಿಂದ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಇದೊಂದೇ ಪರಿಹಾರ ಎಂದಿದ್ದರು. ಆದರೆ ಅವರ ಈ ಮಾತು ತೀವ್ರ ಆಕ್ರೋಶಕ್ಕೆ ಕಾರಣವಗಿತ್ತು. ವಿಪಕ್ಷಗಳು, ರಾಜಕೀಯ ವಿಶ್ಲೇಷಕರು, ಜನಸಾಮಾನ್ಯರೂ ಸಂಸದರ ಮಾತನ್ನು ವಿರೋಧಿಸಿದ್ದರು.
ಈ ನಡುವೆ ಸಂಸದ ಪರ್ವೇಶ್ ಸಾಹೀಬ್ ಸಿಂಗ್ ವರ್ಮಾ ಬಿಜೆಪಿ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಇಂತಹ ಹೇಳಿಕೆ ನೀಡದಂತೆ ಅವರಿಗೆ ಎಚ್ಚರಿಕೆಯನ್ನೂ ಹೈಕಮಾಂಡ್ ನೀಡಿದೆ ಎಂದು ವರದಿಯಾಗಿದೆ.
ಪಕ್ಷದ ಮುಖಂಡರು, ಕಾರ್ಯಕಾರಿಗಳು ವಿವಾದಾತ್ಮಕ ಹೇಳಿಕೆ ನೀಡದಂತೆ ಕಳೆದ ಜುಲೈನಲ್ಲಿ ಹೈದರಾಬಾದ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದರು.