ಬಳ್ಳಾರಿ, ಅ 15 (DaijiworldNews/DB): ಬಿಜೆಪಿ ಮತ್ತು ಆರೆಸ್ಸೆಸ್ನ ಸಿದ್ದಾಂತಗಳು ದೇಶ ಒಡೆಯಲು ಕಾರಣವಾಗುತ್ತಿದೆ. ದೇಶವನ್ನು ಜೋಡಿಸುವ ಕೆಲಸ ನಮ್ಮಿಂದಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, ದೇಶವನ್ನು ಆ ಪಕ್ಷ ಮತ್ತು ಸಂಘಟನೆಯ ಸಿದ್ದಾಂತಗಳು ಒಡೆಯುತ್ತಿವೆ. ಇದು ಹಲವರಿಗೆ ತಿಳಿದಿರುವ ವಿಚಾರ. ನಾವು ದೇಶವನ್ನು ಜೋಡಿಸುವ ಕೆಲಸ ಮಾಡಬೇಕು. ಅದಕ್ಕಾಗಿಯೇ ಭಾರತ್ ಜೋಡೋ ಯಾತ್ರೆ ಎಂಬ ಹೆಸರಿನಲ್ಲಿ ಯಾತ್ರೆ ಮುಂದೆ ಸಾಗುತ್ತಿದೆ ಎಂದರು.
ದೇಶದಲ್ಲಿ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಈಗ ಸೃಷ್ಟಿಯಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಿದ ಪ್ರಧಾನ ಮಂತ್ರಿಯವರು ಆ ಉದ್ಯೋಗಗಳೆಲ್ಲ ಎಲ್ಲಿವೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಕರ್ನಾಟಕ ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಯಾಗದೆ ಬಾಕಿ ಉಳಿಯಲು ಕಾರಣವೇನು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ನೀವು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಬೇಕಾದರೆ 80 ಲಕ್ಷ ರೂ. ನೀಡಬೇಕು. ಇಲ್ಲವಾದರೆ ಜೀವನದುದ್ದಕ್ಕೂ ನಿರುದ್ಯೋಗಿಯಾಗಿಯೇ ಉಳಿಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ವಿಷಾದ ವ್ಯಕ್ತಪಡಿಸಿದರು.