ಪಣಜಿ, , ಅ 15 (DaijiworldNews/DB): ಭಾರೀ ಮಳೆಯಿಂದಾಗಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಗೋವಾದ ದೂಧ್ ಸಾಗರ್ ಜಲಪಾತದ ಬಳಿ ಸಿಲುಕಿಕೊಂಡಿದ್ದ ಸುಮಾರು 40 ಮಂದಿ ಪ್ರವಾಸಿಗರನ್ನು ಜೀವ ರಕ್ಷಕ ಸಿಬಂದಿ ರಕ್ಷಿಸಿ ಸುರಕ್ಷಿತವಾಗಿ ತಲುಪಿಸಿದ್ದಾರೆ.
ದಕ್ಷಿಣ ಗೋವಾದ ದೂಧ್ಸಾಗರ್ ಜಲಪಾತ ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಒಮ್ಮಿಂದಲೇ ಏರಿಕೆಯಾಗಿ ಅಲ್ಲೇ ಬಾಕಿಯಾಗಿದ್ದರು. ಮಾಂಡೋವಿ ನದಿ ದಾಟಲು ಇರುವ ಸಣ್ಣ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಪ್ರವಾಸಿಗರಿಗೆ ಹಿಂತಿರುಗಲು ಸಾಧ್ಯವಾಗದೆ ಜಲಪಾತದ ಬಳಿಯೇ ಬಾಕಿಯಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜೀವರಕ್ಷಕ ಸಿಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಸಿಗರ ಜೀವ ಉಳಿಸಿದ್ದಾರೆ. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಅಪಾಯವನ್ನು ಲೆಕ್ಕಿಸದೆ ಪ್ರವಾಸಿಗರ ಜೀವ ಉಳಿಸಿದ ರಿವರ್ ಲೈಫ್ ಸೇವರ್ಸ್ ಜೀವ ರಕ್ಷಕರ ತಂಡಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಭಿನಂದನೆ ಸಲ್ಲಿಸಿದ್ದಾರೆ.
ದೂಧ್ ಸಾಗರ ಜಲಪಾತವು ಗೋವಾ-ಕರ್ನಾಟಕ ಗಡಿಯಲ್ಲಿದ್ದು, ಇದರ ಆಕರ್ಷಣೀಯ ಚೆಲುವನ್ನು ಆಸ್ವಾದಿಸಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಮಳೆಗಾಲ ಆರಂಭದಲ್ಲಿ ಈ ಜಲಪಾತಕ್ಕೆ ಪ್ರವಾಸಿಗರ ಭೇಟಿಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವಾರದ ಆರಂಭದಲ್ಲಿ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಯನ್ನು ಮುಕ್ತಗೊಳಿಸಲಾಗಿತ್ತು.