ಶ್ರೀನಗರ, ಅ 15 (DaijiworldNews/DB): ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಐವರು ಸರ್ಕಾರಿ ನೌಕರರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ.
ವಜಾಗೊಂಡ ಉದ್ಯೋಗಿಗಳು ನಾರ್ಕೋ-ಟೆರರ್ ಸಿಂಡಿಕೇಟ್ನ್ನು ನಡೆಸುತ್ತಿದ್ದರು. ಅಲ್ಲದೆ, ನಿಷೇಧಿತ ಸಂಘಟನೆಗಳಿಗೆ ದಾಳಿ ನಡೆಸಲು ಸಹಾಯ ಮಾಡುತ್ತಿದ್ದರು ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಈ ಕಾರಣದಿಂದಾಗಿ ಉದ್ಯೋಗಿಗಳ ವಿರುದ್ದ ಕಠಿಣ ಕ್ರಮ ಕೈಗೊಂಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರ ಪೊಲೀಸ್ ಕಾನ್ಸ್ಟೇಬಲ್ ತನ್ವೀರ್ ಸಲೀಂ ದಾರ್, ಬಾರಾಮುಲ್ಲಾ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಮ್ಯಾನೇಜರ್ ಅಫಕ್ ಅಹ್ಮದ್ ವಾನಿ, 1991ರಲ್ಲಿ ಬಿಡಿಒ ಕಚೇರಿಯಲ್ಲಿ ತೋಟದ ಮೇಲ್ವಿಚಾರಕ ಇಫ್ತಿಕರ್ ಅಂದ್ರಾಬಿ, ಜಲಶಕ್ತಿ ಇಲಾಖೆಯಲ್ಲಿದ್ದ ಇರ್ಷಾದ್ ಅಹ್ಮದ್ ಖಾನ್ ಹಾಗೂ ಪಿಎಚ್ಇ ಉಪವಿಭಾಗದ ಸಹಾಯಕ ಲೈನ್ಮ್ಯಾನ್ ಅಬ್ದುಲ್ ಮೋಮಿನ್ ಪೀರ್ ವಜಾಗೊಂಡ ಸರ್ಕಾರಿ ನೌಕರರು.
ವಜಾಗೊಂಡವರ ಪೈಕಿ ತನ್ವೀರ್ ಎಂಬಾತ ಭಯೋತ್ಪಾದಕರ ಬಂದೂಕು ಸರಿಪಡಿಸುವುದು ಮತ್ತು ಅವರಿಗೆ ಮದ್ದುಗುಂಡುಗಳ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತಿದ್ದ. ಅಲ್ಲದೆ ಶ್ರೀನಗರದಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಭಯೋತ್ಪಾದಕ ಕಮಾಂಡರ್ ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರ ಕೂಡಾ ಆಗಿದ್ದ. ಶ್ರೀನಗರದಲ್ಲಿ 2003, 2004ರಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಈತ ಎಂಎಲ್ಸಿ ಜಾವೈದ್ ಶಲ್ಲಾ ಹತ್ಯೆಯಲ್ಲಿಯೂ ಪಾತ್ರ ವಹಿಸಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಭಯೋತ್ಪಾದಕರಿಗೆ ಹಣಕಾಸು ವ್ಯವಸ್ಥೆ ಮತ್ತು ಮಾದಕ ವಸ್ತು ಕಳ್ಳಸಾಗಣೆ ಮಾಡಲು, ಭಯೋತ್ಪಾದಕ ದಾಳಿಗಳನ್ನು ಸುಲಭವಾಗಿಸಲು ಅಫಕ್ ಅಹ್ಮದ್ ವಾನಿ ಸಹಕರಿಸುತ್ತಿದ್ದ. ಇಫ್ತಿಕರ್ ಅಂದ್ರಾಬಿ ಪಾಕಿಸ್ತಾನಕ್ಕೆ ಹಲವಾರು ಬಾರಿ ಹೋಗಿ ಬಂದಿದ್ದ. ನಾಗರಿಕರು, ಭದ್ರತಾ ಪಡೆಗಳ ವಿರುದ್ದ ದಾಳಿಗೆ ಈತ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ. ಇರ್ಷಾದ್ ಅಹ್ಮದ್ ಖಾನ್ ಮದ್ದುಗುಂಡು, ಶಸ್ತ್ರಾಸ್ತಗಳ ಪೂರೈಕೆಯಲ್ಲಿ ತೊಡಗಿದ್ದ ಎಂದೂ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.