ಬೆಂಗಳೂರು, ಅ 15 (DaijiworldNews/MS): ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಿ ಕರ್ನಾಟಕಾದ ಬಳ್ಳಾರಿ ತಲುಪಿದೆ. ಆದರೆ ಈ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯ ಬಿಜೆಪಿ ಘಟಕವು " ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ, ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ ಕೆಲವೊಂದಷ್ಟು ಸಂಗತಿ ನೆನಪಿಸುತ್ತಿದ್ದೇವೆ" ಎಂದು ಹೇಳಿದೆ.
ಸರಣಿ ಟ್ವಿಟ್ ಮಾಡಿರುವ ಬಿಜೆಪಿಯೂ, ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿಗೆ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ.ಡಿಸೇಲ್ ದರ/ಲೀ.ಆಂಧ್ರಪ್ರದೇಶ - 99.15, ತೆಲಂಗಾಣ - 97.82,ರಾಜಸ್ಥಾನ - 93.72, ಕರ್ನಾಟಕ - 87.94 ಇದೆ. ಹೀಗಾಗಿ ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು! ಎಂದು ಟಾಂಗ್ ಕೊಟ್ಟಿದೆ.
ಇದಲ್ಲದೆ ರಾಹುಲ್ ಅವರು ನೆನಪಿಡಲೇ ಬೇಕಾದ ರಾಜ್ಯದ ಕೆಲವೊಂದಷ್ಟು ಸಂಗತಿಗಳಿವೆ.ಅಮೇಥಿ ಸೋಲಿನ ಭಯದಿಂದ ಸೋನಿಯಾ ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಆದರೆ, ಗೆದ್ದ ಬಳಿಕ ಅದೇ ಕ್ಷೇತ್ರವನ್ನು ಎಡಗಾಲಿನಲ್ಲಿ ಒದ್ದು ರಾಜಿನಾಮೆ ನೀಡಿ, ಅಮೇಥಿಗೆ ಓಡಿ ಹೋದರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ ಎಂದು ಹೇಳಿದೆ.
ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು. ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರು ನಿಕೃಷ್ಟವಾಗಿ ನಡೆಸಿಕೊಂಡರು ಎಂದು ಬಿಜೆಪಿ ಹೇಳಿದೆ,
ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ನಾಯಕ, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅತ್ಯಂತ ಅಮಾನವೀಯವಾಗಿ ರಾಜೀವ್ ಗಾಂಧಿ ಪದಚ್ಯುತಗೊಳಿಸಿದ್ದರು. ರಾಹುಲ್ ಗಾಂಧಿ ಅವರೇ, ತಮ್ಮದೇ ಪಕ್ಷದ ವೀರಶೈವ ಲಿಂಗಾಯತ ನಾಯಕನೊಬ್ಬನನ್ನು ರಾಜಕೀಯವಾಗಿ ತುಳಿದ ಘಟನೆಯನ್ನು ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ ಎಂದು ಬಿಜೆಪಿ ಲೇವಡಿ ಮಾಡಿದೆ,