ಜೆಮ್ಶೆಡ್ಪುರ (ಜಾರ್ಖಂಡ), ಅ 15 (DaijiworldNews/DB): ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವ ಅನುಮಾನದ ಹಿನ್ನಲೆಯಲ್ಲಿ ಸಮವಸ್ತ್ರ ಕಳಚುವಂತೆ ಕೊಠಡಿ ಮೇಲ್ವಿಚಾರಕಿ ಒತ್ತಾಯಿಸಿದ್ದರಿಂದ ನೊಂದು ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡ ಘಟನೆ ಜೆಮ್ಶೆಡ್ಪುರದಲ್ಲಿ ನಡೆದಿದೆ.
ತೀವ್ರ ಸುಟ್ಟ ಗಾಯಗಳಾದ ಕಾರಣ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕಿ ಜೀವನ್ಮರಣ ಹೋರಾಟದಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಮೇಲ್ವಿಚಾರಕಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಬಾಲಕಿ ಪರೀಕ್ಷೆಯಲ್ಲಿ ನಕಲಿ ಮಾಡುವುದಕ್ಕಾಗಿ ಚೀಟಿಗಳನ್ನು ತಂದು ಅದನ್ನು ಸಮವಸ್ತ್ರದಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ ಎಂದು ಅನುಮಾನಿಸಿದ ಕೊಠಡಿ ಮೇಲ್ವಿಚಾರಕಿ, ಚೀಟಿ ಇದೆಯೇ ಎಂಬುದನ್ನು ಪರಿಶೀಲಿಸಲು ಆಕೆಯನ್ನು ಪಕ್ಕದ ಕೋಣೆಗೆ ಕರೆದೊಯ್ದಿದ್ದಾಳೆ. ಈ ವೇಳೆ ಸಮವಸ್ತ್ರ ಬಿಚ್ಚಲು ಬಾಲಕಿಗೆ ತಾಕೀತು ಮಾಡಿದ್ದಾಳೆ. ಆದರೆ ಬಾಲಕಿ ಇದಕ್ಕೆ ಪ್ರತಿರೋಧ ಒಡ್ಡಿದಾಗ ಬಲವಂತವಾಗಿ ಸಮವಸ್ತ್ರ ತೆಗೆಸಿದ್ದಾಳೆ. ಇದರಿಂದ ನೊಂದು ಬಾಲಕಿ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ವರದಿಯಾಗಿದೆ.