ಉತ್ತರ ಪ್ರದೇಶ, ಅ 15 (DaijiworldNews/DB): ಆಹಾರ ಸಾಮಾಗ್ರಿ ಮನೆಗೆ ವಿತರಿಸುವಂತೆ ಮನವಿ ಮಾಡಿದ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಝೊಮ್ಯಾಟೋ ನಡೆಸುತ್ತಿಲ್ಲ ಎಂದು ಜಿಲ್ಲಾಧಿಕಾರಿಯೊಬ್ಬರು ದರ್ಪದಿಂದ ಮಾತನಾಡಿದ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಕಳೆದ 15 ದಿನಗಳಿಂದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಬಡವರಿಗೆ ತೀರಾ ಸಂಕಷ್ಟ ಎದುರಾಗಿದ್ದು, ಮನೆಯಿಂದ ಹೊರ ಬರಲು ಪರದಾಡುತ್ತಿದ್ದಾರೆ. ಹೀಗಾಗಿ ಅಂತಹವರಿಗೆ ಆಹಾರ ಸಾಮಾಗ್ರಿಗಳನ್ನು ಮನೆಗೆ ತಲುಪಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಜನರು ಮನವಿ ಮಾಡಿದ್ದಾರೆ.
ಆದರೆ ಜನರ ಮನವಿಗೆ ಆಕ್ರೋಶಗೊಂಡ ಅಂಬೇಡ್ಕರ್ ನಗರ ಜಿಲ್ಲಾಧಿಕಾರಿ, ನಿಮ್ಮ ಮನೆಮನೆಗೆ ಪರಿಹಾರ ಸಾಮಾಗ್ರಿ ತಲುಪಿಸಲು ಸರ್ಕಾರ ಝೊಮ್ಯಾಟೋ ನಡೆಸುತ್ತಿಲ್ಲ ಎಂದು ದರ್ಪದಿಂದ ಮಾತನಾಡಿದ್ದಾರೆ. ಪರಿಹಾರ ಕೇಂದ್ರಗಳಿಗೆ ಬಂದು ಸ್ವತಃ ನೀವೇ ಸಾಮಾಗ್ರಿ ಕೊಂಡೊಯ್ಯಬೇಕು. ಅಲ್ಲಿ ಹೆಸರು ನೋಂದಾವಣೆ ಮಾಡಿಕೊಂಡವರಿಗೆ ಮಾತ್ರ ಆಹಾರ ಸಾಮಾಗ್ರಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾರಿಕೆಯ ಉತ್ತರ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿಯವರ ಈ ಮಾತುಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ ವಿತರಿಸಬಹುದೇ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ್ದಕ್ಕೆ, ಮಹಿಳಾ ಅಧಿಕಾರಿಯೊಬ್ಬರು ಹೀಗೆ ಉಚಿತವಾಗಿ ನೀಡಿದರೆ ಮುಂದೆ ನೀವು ಕಾಂಡೋಮ್ ಕೂಡಾ ಸರ್ಕಾರ ಉಚಿತವಾಗಿ ನೀಡಲಿ ಎನ್ನುತ್ತೀರಿ ಎಂದು ದರ್ಪದ ಮಾತುಗಳಾಡಿದ್ದರು. ಬಳಿಕ ಇದು ವಿವಾದವಾದ ಹಿನ್ನೆಲೆಯಲ್ಲಿ ಅಧಿಕಾರಿ ಕ್ಷಮೆ ಕೇಳಿದ್ದರು. ಇದೀಗ ಐಎಎಸ್ ಅಧಿಕಾರಿಯೊಬ್ಬರು ದರ್ಪ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.