ತಿರುವನಂತಪುರಂ,ಅ 15 (DaijiworldNews/MS): ಕೋವಿಡ್-19 ಸಮಯದಲ್ಲಿ ಪಿಪಿಇ ಕಿಟ್ಗಳು ಮತ್ತು ಇತರ ಶಸ್ತ್ರಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಎಲ್ಡಿಎಫ್ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಈ ಕುರಿತು ಕೇರಳ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹಾಗೂ ಇತರ 12 ಮಂದಿ ವಿರುದ್ಧ ತನಿಖೆಗೆ ಶುಕ್ರವಾರ ಆದೇಶಿಸಿದೆ.
ಕೇರಳ ವೈದ್ಯಕೀಯ ಸೇವಾ ನಿಗಮ ನಿಯಮಿತ (ಕೆಎಂಎಸ್ಸಿಎಲ್) ಮೂಲಕ ದುಬಾರಿ ದರದಲ್ಲಿ ಪಿಪಿಇ ಕಿಟ್ಗಳನ್ನು ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಪಕ್ಷದೊಳಗೇ ಪ್ರಯತ್ನಗಳು ನಡೆಯುತ್ತಿರುವಾಗಲೇ ಲೋಕಾಯುಕ್ತ ತನಿಖೆಗೆ ಆದೇಶಿಸಿರುವುದು ಗಮನಿಸಬೇಕಾಂದ ಅಂಶವಾಗಿದೆ.
2020 ರಲ್ಲಿ ಕೇರಳ ಕೋವಿಡ್ ನಿಂದ ತತ್ತರಿಸುತ್ತಿರುವಾಗ ಪಿಪಿಇ ಕಿಟ್ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಹೆಚ್ಚು ದರದಲ್ಲಿ ಖರೀದಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ವೀಣಾ ಎಸ್ ನಾಯರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪಿಪಿಇ ಕಿಟ್ ನ ಬೆಲೆ ಒಂದೇ ದಿನದಲ್ಲಿ ಮೂರು ಪಟ್ಟು ಬೆಲೆ ಏರಿಕೆಯಾಗಿದೆ ಎಂದು ತಿಳಿದುಬಂದಿತ್ತು. 29ನೇ ಮಾರ್ಚ್ 2020 ರ ಖರೀದಿಯಲ್ಲಿ, ಒಂದು ಪಿಪಿಇ ಕಿಟ್ನ ಬೆಲೆ 446 ರೂ ಆಗಿದ್ದರೆ, ಮಾರ್ಚ್ 30, 2020 ರ ಖರೀದಿಯಲ್ಲಿ 1,550 ರೂ. ಆಗಿತ್ತು ಎಂದು ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 9(3) ರ ಅಡಿಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಶೈಲಜಾ ಅವರಲ್ಲದೆ, ಮಾಜಿ ಆರೋಗ್ಯ ಕಾರ್ಯದರ್ಶಿ ಡಾ.ರಾಜನ್ ಎನ್ ಖೋಬ್ರಾಗಡೆ, ವೈದ್ಯಕೀಯ ಸೇವಾ ನಿಗಮದ ಮಾಜಿ ಎಂಡಿ ಬಾಲಮುರಳಿ ಮತ್ತು ವೈದ್ಯಕೀಯ ಸೇವಾ ನಿಗಮದ ಮಾಜಿ ಜಿಎಂ ಎಸ್ ಆರ್ ದಿಲೀಪ್ಕುಮಾರ್ ಅವರು ಇತರ ಪ್ರಮುಖ ಆರೋಪಿಗಳಾಗಿದ್ದಾರೆ.