ಹೊಸೂರು, ಅ 14 (DaijiworldNews/DB): ಕಾರ್ಖಾನೆಯೊಂದರ ಕೆಮಿಕಲ್ ಟ್ಯಾಂಕ್ ಒಡೆದು ಸನಿಹದಲ್ಲೇ ಇದ್ದ ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ಮಕ್ಕಳಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡು ರಾಜ್ಯದ ಹೊಸೂರು ಸರ್ಕಾರಿ ಶಾಲೆಯೊಂದರ ಹಿಂಭಾಗದಲ್ಲಿರುವ ಕಾರ್ಖಾನೆಯಲ್ಲಿ ರಾಸಾಯನಿಕ ತುಂಬಿಸಿಟ್ಟ ಟ್ಯಾಂಕ್ ಒಡೆದು ರಾಸಾಯನಿಕ ಗಾಳಿಯಲ್ಲಿ ಪಸರಿಸಿದೆ. ಇದರಿಂದ ಶಾಲಾ ಮಕ್ಕಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಘಟನೆಯಿಂದ ಶಾಲೆಯಲ್ಲಿದ್ದವರು, ಸ್ಥಳೀಯರು ಆತಂಕಗೊಂಡಿದ್ದು, ಕೂಡಲೇ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಸಿರಾಡಲು ಸಾಧ್ಯವಾಗದೆ ಮಕ್ಕಳು ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದು, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಕಾರ್ಖಾನೆಯ ಅಸಮರ್ಪಕ ನಿರ್ವಹಣೆ ಮತ್ತು ಸಿಬಂದಿಯ ಬೇಜವಾಬ್ದಾರಿಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕಾರ್ಖಾನೆ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.