ಶರಣ್, ಅ 14 (DaijiworldNews/DB): ಬಿಹಾರದ ಶರಣ್ ಜಿಲ್ಲೆಯ ರೆವೆಲಗಂಜ್ ಸ್ಪೋಲೀಸ್ ಠಾಣೆ ವ್ಯಾಪ್ತಿಯ ಡಿಯೋರಿಯಾ ಗ್ರಾಮದಲ್ಲಿ ದ್ವಿಚಕ್ರ ವಾಹನಕ್ಕೆ ಪೊಲೀಸ್ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದರಿಂದ ಮೂವರು ಯುವಕರ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಂದನ್ ಮಂಝಿ (22), ಬುಲ್ಬುಲ್ ಮಂಝಿ (25), ಕಿಶೋರ್ ಮಂಝಿ (24) ಮೃತ ದುರ್ದೈವಿಗಳು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಜಯಪ್ರಕಾಶ್ ನಾರಾಯಣ್ ಅವರ 120ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರ ವಾಹನ ರಾಷ್ಟ್ರೀಯ ಹೆದ್ಧಾರಿ 531ರಲ್ಲಿ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ. ಮೂವರು ಯುವಕರು ಸಂಚರಿಸುತ್ತಿದ್ದ ಬೈಕ್ಗೆ ಪೊಲೀಸ್ ವ್ಯಾನ್ ಡಿಕ್ಕಿ ಹೊಡೆದಿದ್ದು, ಕೆಲ ಮೀಟರ್ಗಳಷ್ಟು ದೂರ ಎಳೆದೊಯ್ದಿದೆ. ಈ ವೇಳೆ ಬೈಕ್ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದೆ.
ಮೃತರ ಪೈಕಿ ಓರ್ವ ಯುವಕ ಹೊತ್ತಿ ಉರಿಯುತ್ತಿರುವುದನ್ನು ಪೊಲೀಸರು ದೂರದಲ್ಲಿ ನಿಂತು ನೋಡುತ್ತಿದ್ದರು. ಆದರೆ ರಕ್ಷಣೆಗೆ ಧಾವಿಸಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ಸಂಬಂಧ ದೂರು ದಾಖಲಾಗಿದ್ದು, ವೀಡಿಯೋ ಸಾಕ್ಷ್ಯಗಳನ್ನು ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.