ಭುವನೇಶ್ವರ್, ಅ 14 (DaijiworldNews/MS): ಒಡಿಶಾದ ಕಾಲಾಹಂಡಿ ಜಿಲ್ಲೆಯ ಬಡ ಕುಟುಂಬದಿಂದ ಬಂದ ಐಷಾರಾಮಿ ಜೀವನ ತನ್ನದಾಗಿಸಿಕೊಂಡ ಅರ್ಚನಾ ನಾಗ್ ಎಂಬ ಮಹಿಳೆಯ ಲೈಫ್ ಸ್ಟೋರಿ ಎಷ್ಟು ಕುತೂಹಲ ಕೆರಳಿಸಿದೆ ಎಂದರೆ ಒಡಿಶಾದ ಸಿನಿಮಾ ನಿರ್ಮಾಪಕರೊಬ್ಬರು ಆಕೆಯ ಜೀವನದ ಮೇಲೆ ಸಿನಿಮಾ ಮಾಡಲು ಯೋಜಿಸಿದ್ದಾರೆ.!
ಅರಮನೆಯಂತಹ ಮನೆ, ಆಮದು ಮಾಡಿದ ಒಳಾಂಗಣ ಅಲಂಕಾರಿಕ ವಸ್ತುಗಳು, , ಐಷಾರಾಮಿ ಕಾರುಗಳು, ದುಬಾರಿಯಾಗಿರುವ ನಾಲ್ಕು ಉನ್ನತ ತಳಿಯ ನಾಯಿಗಳು ಮತ್ತು ಅರಮನೆಯಲ್ಲಿ ಶ್ವೇತ ಬಣ್ಣದ ಕುದುರೆ ಈಕೆ ನಡೆಸುವ ಐಷಾರಾಮಿ ಜೀವನ ಎಂತವರನ್ನು ಕಣ್ಣುಕುಕ್ಕುವಂತೆ ಮಾಡುತ್ತದೆ.
ಸದ್ಯ ಬೆದರಿಸಿ ಅನೇಕ ಹೈ ಪ್ರೊಫೈಲ್ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್ಮೇಲರ್ ಅರ್ಚನಾ ನಾಗ್ ಅನ್ನು ಪೊಲೀಸರು ಬಂಧಿಸಿದ್ದು ಖತರ್ನಾಕ್ ಲೇಡಿಯ ಬಗ್ಗೆ ಪ್ರತಿದಿನ ಸಾಕಷ್ಟು ಶಾಕಿಂಗ್ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಕಲಹಂಡಿಯ ಲಾಂಜಿಗಢದಲ್ಲಿ ಜನಿಸಿದ ಅರ್ಚನಾ 2015 ರಲ್ಲಿ ಭುವನೇಶ್ವರಕ್ಕೆ ಬರುವ ಮೊದಲು ಅದೇ ಜಿಲ್ಲೆಯ ಕೆಸಿಂಗಾ ಎಂಬ ಪಟ್ಟಣದಲ್ಲಿ ಆಕೆಯ ತಾಯಿಯೊಂದಿಗೆ ಕೆಲಸ ಮಾಡುತ್ತಿದ್ದಳು.
ಆ ಬಳಿಕ ಅರ್ಚನಾ ಅವರು ಆರಂಭದಲ್ಲಿ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಂತರ ಬ್ಯೂಟಿ ಪಾರ್ಲರ್ಗೆ ಸೇರಿಕೊಂಡರು ಮತ್ತು ಅಲ್ಲಿ ಅವರು ಬಾಲಸೋರ್ ಜಿಲ್ಲೆಯ ಜಗಬಂಧು ಚಂದ್ ಅವರನ್ನು ಭೇಟಿಯಾಗಿ 2018 ರಲ್ಲಿ ಅವರನ್ನು ವಿವಾಹವಾಗಿದ್ದಳು.
ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು. ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.
ಆರೋಪಿ ಅರ್ಚನಾ ನಾಗ್, ರಾಜಕಾರಣಿಗಳು, ಬಿಲ್ಡರ್ಗಳು, ಉದ್ಯಮಿಗಳು ಸೇರಿದಂತೆ 18 ಶಾಸಕರು ಹಾಗೂ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ.
ರ್ಚನಾ ಮತ್ತು ಆಕೆಯ ಪತಿ ಜಗಬಂಧು ಚಂದ್ ಅವರು ಅನೇಕ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವು ರಾಜಕಾರಣಿಗಳು ಅರ್ಚನಾ ಪರಿಚಯವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಆಕೆಯೊಂದಿಗಿನ ಸಂಬಂಧವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಪೊಲೀಸರು ಸಹ ಆ ಆಯಾಮದಲ್ಲಿ ಸಕ್ರಿಯವಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹನಿಟ್ರ್ಯಾಪ್ ಆಗಿರುವ ಆರೋಪ ಹೊತ್ತಿರುವ 11 ಶಾಸಕರಲ್ಲಿ ರಾಜ್ಯ ಸರ್ಕಾರದ 3 ಸಚಿವರೂ ಇದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಬಾಬು ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.