ಕೇರಳ, ಅ 14 (DaijiworldNews/DB): ಇತ್ತ 12 ಲಕ್ಷ ರೂ. ಸಾಲ ಪಾವತಿಸಲಾಗದೆ ಮನೆ ಜಪ್ತಿಗೆ ಅಧಿಕಾರಿಗಳು ನೋಟಿಸ್ ನೀಡಿದರೆ, ಅತ್ತ 70 ಲಕ್ಷ ರೂ. ಲಾಟರಿ ಹೊಡೆದಿರುವ ಬಗ್ಗೆ ಸಹೋದರನಿಂದ ಕರೆ! ಕೇರಳ ಲಾಟರಿಯಲ್ಲಿ 70 ಲಕ್ಷ ರೂ. ವಿಜೇತರಾಗಿರುವ ಪೂಕುಂಜ ಅವರ ಜೀವನದಲ್ಲಿ ಒಂದೇ ದಿನದಲ್ಲಿ ಒಂದೂವರೆ ಗಂಟೆ ಅಂತರದಲ್ಲಿ ಒದಗಿ ಬಂದ ಅದೃಷ್ಟದ ನೈಜ ಕತೆಯಿದು.
ಸಾಲದ ಸುಳಿಯಲ್ಲಿದ್ದ ಮೈನಾಗಪಳ್ಳಿಯ ಪಾಲಮೂತಿಲ್ ನಿವಾಸಿ, ಮೀನು ಮಾರಾಟಗಾರ ಪೂಕುಂಜ (40) ಅವರು ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ 12 ಲಕ್ಷ ರೂ.ಗಳನ್ನು ಬ್ಯಾಂಕ್ಗೆ ಪಾವತಿಸಬೇಕಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಬ್ಯಾಂಕ್ನಿಂದ ಅವರಿಗೆ ಮನೆ ಜಪ್ತಿ ನೊಟೀಸ್ ನೀಡಲಾಗಿದೆ. ಇದರಿಂದ ಪೂಕುಂಜ ತೀರಾ ನೊಂದು ಕುಳಿತಿದ್ದರು. ಆದರೆ ಈ ಸಂಕಷ್ಟಕ್ಕೆ ದೂಡಲ್ಪಟ್ಟ ಒಂದೂವರೆ ಗಂಟೆಯೊಳಗೆ ಅವರ ಅದೃಷ್ಟ ಖುಲಾಯಿಸಿದೆ. ಬ್ಯಾಂಕಿನಿಂದ ನೋಟಿಸ್ ಪಡೆದುಕೊಂಡ ಒಂದೂವರೆ ಗಂಟೆಯೊಳಗೆ ಅವರ ಸಹೋದರ ಕರೆ ಮಾಡಿ 70 ಲಕ್ಷ ರೂ. ಲಾಟರಿ ವಿಜೇತರಾಗಿರುವ ವಿಚಾರವನ್ನು ತಿಳಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಮನೆ ಕಟ್ಟಲೆಂದು ಕಾರ್ಪೋರೇಶನ್ ಬ್ಯಾಂಕಿನಲ್ಲಿ ಪೂಕುಂಜ 7.45 ಲಕ್ಷ ರೂ. ಸಾಲ ಮಾಡಿದ್ದರು. ಪ್ರಸ್ತುತ ಅದರ ಬಡ್ಡಿ ಸೇರಿ ಸುಮಾರು 12 ಲಕ್ಷ ರೂ. ಆಗಿತ್ತು. ಸಾಲ ತೀರಿಸಲು ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಅವರಿಗೆ ಮನೆ ಜಪ್ತಿ ಮಾಡುವ ಬಗ್ಗೆ ನೋಟಿಸ್ ನೀಡಿತ್ತು. ಮನೆ ಹೋಗುತ್ತದೆಂಬ ಬೇಸರದಲ್ಲಿದ್ದ ಪೂಕುಂಜ ಇದೀಗ ಲಾಟರಿ ಬಂದಿರುವ ಖುಷಿಯಲ್ಲಿದ್ದಾರೆ. ತಂದೆ ಯೂಸುಫ್ ಕುಂಜು ಆಗಾಗ ಲಾಟರಿ ಟಿಕೇಟ್ ಖರೀದಿಸುತ್ತಾರದರೂ, ಪೂಕುಂಜ ಅಪರೂಪಕ್ಕಷ್ಟೇ ಖರೀದಿಸುತ್ತಾರೆ. ಆದರೆ ಇತ್ತೀಚೆಗೆ ಖರೀದಿಸಿದ್ದ ಲಾಟರಿ ಅವರ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿದೆ.