ಉತ್ತರ ಪ್ರದೇಶ, ಅ 14 (DaijiworldNews/DB): ತರಬೇತಿ ಅವಧಿಯಲ್ಲಿ ಮಲಗಿದ್ದಕ್ಕೆ ಕಾರಣ ಕೇಳಿದ ಹಿರಿಯ ಅಧಿಕಾರಿಗಳಿಗೆ ಹೆಡ್ ಕಾನ್ಸ್ಟೇಬಲ್ವೊಬ್ಬರು ನೀಡಿದ ಉತ್ತರ ನೋಡಿ ಹಿರಿಯ ಅಧಿಕಾರಿಗಳೇ ದಂಗಾಗಿದ್ದಾರೆ. 25 ರೊಟ್ಟಿ, ಒಂದು ತಟ್ಟೆ ಅನ್ನ, ಎರಡು ಬಟ್ಟಲು ದಾಲ್ ಮತ್ತು ಒಂದು ಬಟ್ಟಲು ತರಕಾರಿ ತಿಂದು ಆಲಸ್ಯ ಉಂಟಾಗಿ ನಿದ್ದೆ ಹತ್ತಿಕೊಂಡಿತು ಎಂಬ ಕಾರಣವನ್ನು ಹೆಡ್ ಕಾನ್ಸ್ಟೇಬಲ್ ನೀಡಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಸೋಮವಾರ ನಡೆದ ತರಬೇತಿ ವೇಳೆ ಹೆಡ್ ಕಾನ್ಸ್ಟೇಬಲ್ ರಾಮ್ ಶರೀಫ್ ಯಾದವ್ ಮಲಗಿ ನಿದ್ದೆ ಹೋಗಿದ್ದು, ಇದು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ತರಬೇತಿ ಅವಧಿಯಲ್ಲಿ ಮಲಗಿರುವುದು ನಿರ್ಲಕ್ಷ್ಯದ ಸಂಕೇತವಾಗಿದ್ದು, ಕಾರಣ ನೀಡುವಂತೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಇದಕ್ಕೆ ಹೆಡ್ ಕಾನ್ಸ್ಟೇಬಲ್ ನೀಡಿದ ಉತ್ತರಕ್ಕೆ ಹಿರಿಯ ಅಧಿಕಾರಿಗಳು ದಂಗಾಗಿದ್ದಾರೆ.
ನಾನು ತರಬೇತಿಗಾಗಿ ಲಕ್ನೋದಿಂದ ಪಿಟಿಸಿ ದದುಪುರಕ್ಕೆ ಹೊರಟಿದ್ದು, ಸಂಚಾರಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಸರಿಯಾಗಿ ಆಹಾರವೂ ಸಿಗದ ಕಾರಣ ನನಗೆ ಹಸಿವು ಕಾಡುತ್ತಿತ್ತು. ಹೀಗಾಗಿ ಮರುದಿನ ಬೆಳಗ್ಗೆ 25 ರೊಟ್ಟಿ, ಒಂದು ತಟ್ಟೆ ಅನ್ನ, ಎರಡು ಬಟ್ಟಲು ದಾಲ್ ಮತ್ತು ಒಂದು ಬಟ್ಟಲು ತರಕಾರಿ ತಿಂದು ಆಲಸ್ಯ ಉಂಟಾಗಿ ನಿದ್ದೆ ಹತ್ತಿಕೊಂಡಿತು ಎಂದು ಹೆಡ್ ಕಾನ್ಸ್ಟೇಬಲ್ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಅಲ್ಲದೆ, ತನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಇದೇ ವೇಳೆ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಸದ್ಯ ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.