ನವದೆಹಲಿ, ಅ 14 (DaijiworldNews/DB): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕುಟುಂಬ ರಾಜಕೀಯ ಕಲ್ಪನೆಯನ್ನು ಟೀಕಿಸಿದ್ದರು. ಚುನಾವಣೆ ಅಥವಾ ಇತರ ಅರ್ಹತೆಗಳಿಂದಲೇ ರಾಜಕೀಯ ನಾಯಕತ್ವ ರೂಪುಗೊಳ್ಳಬೇಕೆಂಬುದನ್ನು ಅವರು ನಂಬಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ತಮ್ಮ ಹೊಸ ಪುಸ್ತಕ "ಅಂಬೇಡ್ಕರ್: ಎ ಲೈಫ್" ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರಾಧಿಕಾರ ಮೂಲಕ ರಾಜಕೀಯ ನಾಯಕತ್ವ ಮುಂದುವರಿಯಬೇಕೆಂಬ ಕಲ್ಪನೆಯನ್ನು ಅಂಬೇಡ್ಕರ್ ಒಪ್ಪುತ್ತಿರಲಿಲ್ಲ. ಈ ಬಗ್ಗೆ ಅವರು ಬರೆಯದಿದ್ದರೂ, ಈ ಕಲ್ಪನೆಯನ್ನು ಟೀಕಿಸುತ್ತಿದ್ದರು. ಅರ್ಹತೆ ಮತ್ತು ಚುನಾವಣೆಯ ಆಧಾರದ ಮೇಲೆ ನಾಯಕತ್ವ ರೂಪಿಸಬೇಕೆಂಬುದೇ ಅವರ ಇಚ್ಚೆಯಾಗಿತ್ತು ಎಂದರು.
ಅಂಬೇಡ್ಕರ್ ಜೀವನದಲ್ಲಿ ಸಾಕಷ್ಟು ನೋವುಂಡವರು. ಆದರೆ ಅವರ ಭಾಷಣಗಳು ಮತ್ತು ಅದಕ್ಕಿರುವ ತೂಕ ದೊಡ್ಡದು. ಆ ಕಾಲದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಚರ್ಚೆಗಳು ಅರ್ಥಪೂರ್ಣವಾಗಿದ್ದವು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ರಾಜ್ಯಸಭಾ ಸಂಸದ ಬಾಲಚಂದ್ರ ಮುಂಗೇಕರ್ ಮತ್ತು ವಕೀಲ ಕರುಣಾ ನುಂಡಿ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಸಮಯದ ಬಗ್ಗೆ ಮಾತನಾಡಿದರು.