ವಿಜಯನಗರ, ಅ 13 (DaijiworldNews/SM): ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ನದ್ದು, ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ. ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂವಿನಹಡಗಲಿಯಲ್ಲಿ ವ್ಯಂಗ್ಯವಾಡಿದರು.
ಹೂವಿನಹಡಗಲಿಯಲ್ಲಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, "ಹಿಂದಿನ ಮುಖ್ಯಮಂತ್ರಿ ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರುವುದು ಕಾಂಗ್ರೆಸ್ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ. ಕಪ್ಪ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ. ನಮಗೆ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ರಾಜ್ಯದ ಜನರು ಈಗ ಜಾಗೃತರಾಗಿದ್ದಾರೆ. ನೀವು ಆ ಭಾಗ್ಯ ಈ ಭಾಗ್ಯ ಅಂತ ಹೇಳಿಕೊಂಡು ಲೂಟಿ ಮಾಡಿದ್ದೀರಿ. ಅನ್ನಭಾಗ್ಯ ಅಂತ ಹೇಳಿಕೊಂಡು ಕನ್ನ ಭಾಗ್ಯ ಮಾಡಿದ್ದೀರಿ. ಎಸ್ಸಿ, ಎಸ್ಟಿಗೆ ಕೊಳವೆಬಾವಿ ಕೊರೆಸಿದ್ದೇವೆ ಎಂದು ಲೂಟಿ ಮಾಡಿದ್ದೀರಿ. ನೀವು ಭಾಗ್ಯ ಕೊಟ್ಟಿದ್ದರೆ ಜನರು ನಿಮ್ಮನ್ನು ಯಾಕೆ ಸೋಲಿಸುತ್ತಿದ್ದರು? ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿದ್ದರೆ, ಅದು ಕಾಂಗ್ರೆಸ್ನ ಭ್ರಷ್ಟಾಚಾರದಿಂದ," ಎಂದು ಗುಡುಗಿದರು.