ಮಹಾರಾಷ್ಟ್ರ, ಅ 13 (DaijiworldNews/MS): ಮಹಾರಾಷ್ಟ್ರದಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಗುರುವಾರ ಬೆಳಿಗ್ಗೆ ವಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹುಲಿಯು ಚಂದ್ರಾಪುರ ಜಿಲ್ಲೆಯ ವಾಡ್ಸಾದಲ್ಲಿ ಆರು ಜನರನ್ನು, ಭಂಡಾರಾದಲ್ಲಿ ನಾಲ್ವರನ್ನು ಮತ್ತು ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರನ್ನು ಕೊಂದಿತ್ತು.
ತಡೋಬಾ ಹುಲಿ ರಕ್ಷಣಾ ತಂಡ, ಚಂದ್ರಾಪುರ, ನವೆಗಾಂವ್-ನಾಗ್ಜೀರಾ ಮತ್ತು ಇತರ ಘಟಕಗಳ ಕ್ಷಿಪ್ರ ಕಾರ್ಯಾಚರಣೆ ತಂಡಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಿ ಹುಲಿ ಸೆರೆ ಹಿಡಿಯಲಾಗಿದ್ದು, ಇದನ್ನು ಸುಮಾರು 183 ಕಿಲೋಮೀಟರ್ ದೂರದಲ್ಲಿರುವ ನಾಗ್ಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ಪುನರ್ ವಸತಿಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.