ಗುಜರಾತ್, ಅ 13 (DaijiworldNews/MS): ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ನರಬಲಿ ಪ್ರಕರಣದ ಬೆನ್ನಲ್ಲೇ ಗುಜರಾತ್ನಲ್ಲಿ ಮತ್ತೊಂದು ’ಶಂಕಿತ ನರಬಲಿ” ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಧಾರಾ ಗಿರ್ ಗ್ರಾಮದ ಕುಟುಂಬವೊಂದು ತಮ್ಮ 14 ವರ್ಷದ ಮಗಳನ್ನೇ ಬಲಿ ಕೊಟ್ಟಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಹೊರಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅ. 3 ರ ನವರಾತ್ರಿಯ ದಿನ ಈ ಘಟನೆ ನಡೆದಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಪ್ರಕರಣದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ.
ಕುಟುಂಬಕ್ಕೆ ಆರ್ಥಿಕ ಸಮೃದ್ಧಿ ಬರಲಿ ಎಂಬ ನಂಬಿಕೆಯಿಂದ ಅಕ್ಟೋಬರ್ 3ರ ರಾತ್ರಿ ಮಗಳನ್ನು ಬಲಿ ಕೊಡಲಾಗಿದ್ದು, ಆಕೆ ಮತ್ತೆ ಮರುಜನ್ಮ ಸಿಗುತ್ತದೆ ಎಂದು ಇದ್ದು, ನಾಲ್ಕು ದಿನ ಶವ ಇಟ್ಟುಕೊಂಡಿದ್ದರು. ನಂತರ ಕೆಲವೇ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಬಾಲಕಿಯನ್ನು ಅವರ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಗಿರ್ ಸೋಮನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಜಡೇಜಾ ಅವರು ಅಪ್ರಾಪ್ತ ಬಾಲಕಿಯ ನಿಗೂಢ ಸಾವಿನ ಪ್ರಕರಣದಲ್ಲಿ ಪೋಷಕರೇ ಶಂಕಿತರು ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ವಿಚಾರಣೆಯ ಸಮಯದಲ್ಲಿ, ಬಾಲಕಿಯ ತಂದೆ ಭಾವೇಶ್ ನಿರಂತರವಾಗಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಬಾಲಕಿ ಆರು ತಿಂಗಳ ಹಿಂದೆ ಸೂರತ್ನಲ್ಲಿ ಓದುತ್ತಿದ್ದಳು, ಅಲ್ಲಿ ತಂದೆ ಭಾವೇಶ್ ತನ್ನ ಕೆಲಸ ಮಾಡಿಕೊಂಡಿದ್ದ. ಅಜ್ಞಾತ ಕಾರಣಕ್ಕಾಗಿ, ಪೋಷಕರು ಶಾಲೆಯಿಂದ ಬಾಲಕಿಯ ಪ್ರಮಾಣಪತ್ರವನ್ನು ತೆಗೆದುಕೊಂಡು ಬಂದು ಸ್ಥಳೀಯ ಗ್ರಾಮಕ್ಕೆ ಕರೆತಂದಿದ್ದರು". ಎಂದು ಹೇಳಿದ್ದಾರೆ.