ಮಳವಳ್ಳಿ, ಅ 13 (DaijiworldNews/DB): ಟ್ಯೂಶನ್ಗೆ ತೆರಳಿದ್ದ 10 ವರ್ಷದ ಬಾಲಕಿಯ ಶವ ನೀರಿನ ಸಂಪ್ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಟ್ಯೂಶನ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾತನೇ ಬಾಲಕಿಯನ್ನು ಕೊಲೆಗೈದು ನೀರಿನ ಸಂಪ್ಗೆ ಎಸೆದಿದ್ದ ಎಂಬುದು ಗೊತ್ತಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂತರಾಜು (50) ಬಂಧಿತ ಆರೋಪಿ. ಈತ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಹೊರಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಕೊಲೆ ಮಾಡಿ ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ಗೆ ಶವವನ್ನು ಎಸೆದಿದ್ದಾನೆ.
ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಪಟ್ಟಣದ ವಿದ್ಯಾರ್ಥಿನಿ ಮಂಗಳವಾರ ಟ್ಯೂಶನ್ಗೆ ಹೋದವಳು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಟ್ಯೂಶನ್ ಸೆಂಟರ್ನಲ್ಲಿ ವಿಚಾರಿಸಿ ಅಕ್ಕಪಕ್ಕದಲ್ಲಿಯೂ ಹುಡುಕಾಟ ನಡೆಸಿದ್ದರು. ಕೊನೆಗೆ ಬಾಲಕಿ ಪತ್ತೆಯಾಗದ ಕಾರಣ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆನಂತರ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿನಲ್ಲಿ ಬಾಲಕಿ ಶವ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ವಿದ್ಯಾರ್ಥಿನಿಯ ಶವ ಎಂಬುದು ಖಚಿತವಾಗಿತ್ತು.
ಹುಡುಕಾಟದ ನಾಟಕ
ಪೋಷಕರ ದೂರು ಆಧರಿಸಿ ಪೊಲೀಸರು ವಿದ್ಯಾರ್ಥಿನಿಗಾಗಿ ಹುಡುಕಾಡುತ್ತಿದ್ದಾಗ ಆರೋಪಿ ಕಾಂತರಾಜು ಪೊಲೀಸರ ಜೊತೆ ಸೇರಿ ಬಾಲಕಿಯನ್ನು ಹುಡುಕಾಡುವ ನಾಟಕವಾಡಿದ್ದ. ಅಲ್ಲದೆ, ಪೋಷಕರಿಗೆ ಕರೆ ಮಾಡಿ ಪುತ್ರಿ ಬಂದಿಲ್ಲವೇ ಎಂದೂ ವಿಚಾರಿಸಿದ್ದಾನೆ. ಪೋಷಕರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಅದಕ್ಕೂ ಸಹಾಯ ಮಾಡಿದ್ದ. ಯಾರೋ ಮೂರು ಮಂದಿ ಯುವಕರು ಕುಳಿತಿದ್ದರು ಎಂದು ಪೊಲೀಸರಿಗೆ ಹೇಳಿ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದ್ದ. ಈ ವೇಳೆ ಯಾರಾದರೂ ಬರುತ್ತಾರೆಯೇ ಎಂಬುದಾಗಿ ಸ್ಥಳೀಯರಲ್ಲಿ ಪೊಲೀಸರು ವಿಚಾರಿಸಿದಾಗ ಯಾರೂ ಈ ಕಡೆ ಸುಳಿದಾಡುವುದಿಲ್ಲ ಮತ್ತು ಘಟನೆ ನಡೆದ ದಿನವೂ ಯಾರೂ ಇರಲಿಲ್ಲ ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ. ಇದರಿಂದ ಪೊಲೀಸರಿಗೆ ಕಾಂತರಾಜು ಮೇಲೆ ಅನುಮಾನ ವ್ಯಕ್ತವಾಗಿತ್ತು. ಬಳಿಕ ಮೊಬೈಲ್ ಕರೆ ಆಧಾರದಲ್ಲಿ ಪರಿಶೀಲಿಸಲು ಯತ್ನಿಸಿದಾಗ ಕಾಂತರಾಜು ಬಾಲಕಿಗೆ ಟ್ಯೂಶನ್ಗೆ ಬರುವಂತೆ ಕರೆ ಮಾಡಿ ಮಾತನಾಡಿರುವುದು ರೆಕಾರ್ಡ್ ಆಗಿತ್ತು.
ಆರೋಪಿಯು ಕಳೆದ ಒಂದೂವರೆ ದಶಕದಿಂದ ಟ್ಯೂಶನ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ, ಬಾಲಕಿಯನ್ನು ಟ್ಯೂಶನ್ಗೆ ಬರುವಂತೆ ಹೇಳಿ ಆಕೆ ಬಂದಾಗ ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದೊಯ್ದು ಅತ್ಯಾಚಾರ ಎಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸಂಪ್ನಲ್ಲಿ ಹಾಕಿದ್ದ. ಹುಡುಕಾಟದ ವೇಳೆ ಅಮಾಯಕನಂತೆ ವರ್ತಿಸಿದ್ದ. ಶ್ವಾನದಳ ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿ ಸಿಕ್ಕಿ ಬಿದ್ದ. ವಿಚಾರಣೆ ವೇಳೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.