ಬೆಂಗಳೂರು, ಅ 12 (DaijiworldNews/MS): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿ ಟೀಕಿಸಿದೆ.
'ಈ ಭಾಷೆ ನಿಮ್ಮ ಘನತೆಗೆ ತಕ್ಕುದಲ್ಲ. ಪ್ರಧಾನಿ ಮೋದಿ ಬಿಜೆಪಿಗೆ ಪ್ರಶ್ನಾತೀತರು, ಟೀಕಾತೀತರು ಇರಬಹುದು. ಆದರೆ, ಭಾರತ ಪ್ರಜಾಪ್ರಭುತ್ವ ದೇಶ ಎಂಬುದನ್ನು ಮರೆಯದಿರಿ. ನಿಮ್ಮ ಮುಂದಿನ ಬಚ್ಚಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? ಮೋದಿಯೂ ನಿಮ್ಮ ಮುಂದೆ ಬಚ್ಚಾ ಅಲ್ಲವೇ' ಎಂದು ಪ್ರಶ್ನಿಸಿದೆ.
ಬಚ್ಚಾ ರಾಹುಲ್ ಗಾಂಧಿ, ಪ್ರಧಾನಿಯನ್ನು ಟೀಕಿಸುತ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ಗುಡುಗಿದ್ದರು.
ಇದಕ್ಕೂ ಮುನ್ನ ಮೋದಿ ಪಾದದ ಧೂಳಿಗೂ ಸಿದ್ದರಾಮಯ್ಯ ಸಮನಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, " ಯಡಿಯೂರಪ್ಪ ಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನೆಹರೂ ಪಾದಕ್ಕೂ ಮೋದಿ ಸಮಾನ ಅಲ್ಲ ಅಂತ ನಾನು ಹೇಳಕ್ಕಾಗುತ್ತಾ? ಪ್ರಧಾನ ಮಂತ್ರಿ ಅವರು. ಅದೇ ರೀತಿ ನೆಹರೂ ಕಾಲಿಗೂ ಯಡಿಯೂರಪ್ಪ ಸಮನಲ್ಲ ಅಂತಾ ಹೇಳಬಹುದಲ್ವಾ? ಆದರೆ ನಾನು ಅವರಿಗೆ ಆ ರೀತಿ ಹೇಳಲ್ಲ. ಅದು ಕೀಳು ಅಭಿರುಚಿ. ಸಿಎಂ ಆದವರು ಆ ತರಹ ಎಲ್ಲ ಮಾತನಾಡಬಾರದು ಎಂದು ಕಿಡಿಕಾರಿದರು.