ಬೆಂಗಳೂರು, ಅ 12 (DaijiworldNews/DB): ಬಿಬಿಎಂಪಿಯು ಮನೆ ತೆರವುಗೊಳಿಸುವುದಕ್ಕೆ ಮುಂದಾಗಿರುವುದನ್ನು ವಿರೋಧಿಸಿ ದಂಪತಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕೆ.ಆರ್. ಪುರ ಸಮೀಪದ ಗಾಯತ್ರಿ ಲೇಔಟ್ನಲ್ಲಿ ನಡೆದಿದೆ.
ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿದ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿಗಳು ಇಲ್ಲಿನ ಮನೆಗಳ ತೆರವಿಗೆ ಮುಂದಾಗಿದ್ದರು. ಈ ವೇಳೆ ದಂಪತಿ ಮನೆ ನಿರ್ಮಿಸುವಾಗ ಬಿಬಿಎಂಪಿ ಅಧಿಕಾರಿಗಳೇ ಅನುಮತಿ ನೀಡಿದ್ದು, ಬ್ಯಾಂಕಿನಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಮನೆ ಕಟ್ಟಲಾಗಿದೆ. ಆಗ ಈ ಜಾಗ ರಾಜಕಾಲುವೆಯಲ್ಲಿದೆ ಎಂದು ಗೊತ್ತಿರಲಿಲ್ಲವೇ? ಅನುಮತಿ ನೀಡಿದ್ದು ಯಾಕೆ? ಆಗ ಅನುಮತಿ ನೀಡಿ ಈಗ ಏಕಾಏಕಿ ಜೆಸಿಬಿ ತಂದು ಮನೆ ನೆಲಸಮ ಮಾಡಲು ಮುಂದಾಗಿರುವುದು ಯಾಕೆ ಎಂದು ದಂಪತಿ ಪ್ರಶ್ನಿಸಿದ್ದಾರೆ. ಅಲ್ಲದೆ ಮನೆ ತೆರವು ಮಾಡದಂತೆ ತಡೆದಿದ್ದಾರೆ. ಅಧಿಕಾರಿಗಳು ತೆರವಿಗೆ ಮುಂದಾದಾಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆ ತೆರವು ಮಾಡಿದ್ದಲ್ಲಿ ಮನೆಮಂದಿಯೊಂದಿಗೆ ನಾವೂ ಸುಟ್ಟು ಬೂದಿಯಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಆ ಬಳಿಕ ಮನೆ ತೆರವು ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ನಿಲ್ಲಿಸಿದ್ದು, ಪೊಲೀಸರು ದಂಪತಿಯ ಮನವೊಲಿಸುತ್ತಿದ್ದಾರೆ. ಪೊಲೀಸರು ನಮ್ಮನ್ನು ತಡೆದು ಮನೆ ತೆರವಿಗೆ ಅನುವು ಮಾಡಿಕೊಟ್ಟರೆ ನಾವು ಆತ್ಮಹತ್ಯೆ ಮಾಡದೇ ಬಿಡುವುದಿಲ್ಲ ಎಂದು ದಂಪತಿ ಹೇಳಿದ್ದು, ಈ ಕಾರಣಕ್ಕಾಗಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಬೃಹತ್ ಗಾತ್ರದ ವಿಲ್ಲಾಗಳನ್ನು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದರೂ, ಬಿಲ್ಡರ್ಗಳ ವಿಷಯದಲ್ಲಿ ಅಧಿಕಾರಿಗಳು ಸುಮ್ಮನಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿ ಕಟ್ಟಿದ ಬಡ, ಮಧ್ಯಮ ವರ್ಗದವರ ಮನೆಗಳನ್ನು ಮಾತ್ರ ಕೆಡವಿ, ನಮ್ಮ ಮೇಲೆ ಬಿಬಿಎಂಪಿ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.