ಕೇರಳ, ಅ 12 (DaijiworldNews/DB): ಬಾಕಿ ಪಾವತಿ ಮಾಡದಕ್ಕಾಗಿ ಕಟ್ಟಡ ನಿರ್ಮಾಣ ಗುತ್ತಿಗೆದಾರನೊಬ್ಬ ಮೂರು ಗಂಟೆಗೂ ಹೆಚ್ಚು ಕಾಲ ತೆಂಗಿನ ಮರವೇರಿ ಕುಳಿತು ಆತ್ಮಹತ್ಯೆಗೈಯುವ ಬೆದರಿಕೆ ಹಾಕಿದ ಘಟನೆ ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ ಪಟ್ಟಣದ ಪಲ್ಲಿಯೋಡು ಕುಗ್ರಾಮದಲ್ಲಿ ನಡೆದಿದೆ.
ಮನೆಯೊಂದರ ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಸುರೇಶ್ ಅವರಿಗೆ ಮನೆ ಮಾಲಿಕ ಬಾಕಿ ಮೊತ್ತ ಪಾವತಿಸಲು ನಿರಾಕರಿಸಿದ್ದರು. ಹೀಗಾಗಿ ಮನೆ ಮುಂಭಾಗ ಇದ್ದ ತೆಂಗಿನ ಮರವೇರಿದ ಗುತ್ತಿಗೆದಾರ ಬಾಕಿ ಮೊತ್ತ 4.80 ಲಕ್ಷ ರೂ.ಗಳನ್ನು ಮಾಲಕ ತನಗೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಿದ್ದಾರೆ.
ಇದರಿಂದ ಆತಂಕಿತರಾದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬಂದಿ ವ್ಯಕ್ತಿಯನ್ನು ಕೆಳಗಿಳಿಯುವಂತೆ ಸಾಕಷ್ಟು ಮನವಿ ಮಾಡಿದರು. ಆದಾಗ್ಯೂ ಬಾಕಿ ಹಣ ಸಿಗದೆ ಕೆಳಗಿಳಿಯುವುದಿಲ್ಲ ಎಂದು ಗುತ್ತಿಗೆದಾರ ಪಟ್ಟು ಹಿಡಿದು ಮರದಲ್ಲೇ ಕುಳಿತಿದ್ದರು. ಬಳಿಕ ಅಗ್ನಿಶಾಮಕ ಸಿಬಂದಿ ಮರವೇರಿ ಮನವಿ ಮಾಡಿದರೂ ಕೆಳಗಿಳಿಯಲು ಸುರೇಶ್ ಒಲ್ಲೆ ಎಂದಿದ್ದಾರೆ.
ಸತತ ಮೂರು ಗಂಟೆಗೂ ಹೆಚ್ಚು ಕಾಲ ನಡೆಸಿದ ಪ್ರಯತ್ನ ವ್ಯರ್ಥವಾದ ಬಳಿಕ ಬಾಕಿ ಹಣ ವಸೂಲಿ ಮಾಡಿ ನೀಡುವ ಭರವಸೆಯನ್ನು ಅಗ್ನಿಶಾಮಕ ಸಿಬಂದಿ ನೀಡಿದ್ದಾರೆ. ಆದರೆ ಬ್ಯಾಂಕ್ ಖಾತೆಗೆ ಹಣ ಜಮೆಯಾದ ಬಳಿಕವಷ್ಟೇ ಇಳಿಯುವುದಾಗಿ ಸುರೇಶ್ ಪಟ್ಟು ಹಿಡಿದಿದ್ದಾರೆ. ಆನಂತರ ಬಾಕಿ ಹಣ ಜಮೆಯಾಗಿರುವ ಕುರಿತು ಮೊಬೈಲ್ಗೆ ಸಂದೇಶ ಬಂದ ಬಳಿಕ ಕೆಳಗಿಳಿದಿದ್ದಾರೆ.