ನವದೆಹಲಿ, ಅ 12 (DaijiworldNews/DB): ಮುಜಾಫರ್ನಗರದಲ್ಲಿ 2013ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 10,000 ರೂ.ಗಳ ದಂಡ ವಿಧಿಸಿ ವಿಶೇಷ ಸಂಸದ/ಶಾಸಕ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಜಾಮೀನು ಕೂಡಾ ಲಭಿಸಿದೆ.
2013ರ ಆಗಸ್ಟ್ನಲ್ಲಿ ಮುಜಾಫರ್ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ಗೌರವ್ ಮತ್ತು ಸಚಿನ್ ಎಂಬಿಬ್ಬರು ಯುವಕರ ಹತ್ಯೆ ಖಂಡಿಸಿ ನಗರ ಮತ್ತು ಆಸುಪಾಸಿನ ಪ್ರದೇಶದಲ್ಲಿ ಗಲಭೆ ನಡೆದಿದ್ದು, ಈ ಗಲಭೆಯಿಂದಾಗಿ 60 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ ಹಲವು ಮುಸ್ಲಿಂ ಕುಟುಂಬಗಳು ಗ್ರಾಮ ತೊರೆದು ಇತರೆಡೆಗೆ ಸ್ಥಳಾಂತರಗೊಂಡಿದ್ದರು.
ಬಳಿಕ ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಸೇರಿದಂತೆ 28 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಾಕ್ಷ್ಯಗಳ ಕೊರತೆಯಿಂದಾಗಿ 15 ಮಂದಿಯನ್ನು ದೋಷ ಮುಕ್ತಗೊಳಿಸಲಾಗಿದ್ದು, ಓರ್ವ ಆರೋಪಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದ. ಉಳಿದ 11 ಮಂದಿ ಹಾಗೂ ವಿಕ್ರಮ್ ಸೈನಿ ಅವರಿಗೆ ಇದೀಗ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಎಲ್ಲಾ ಆರೋಪಿಗಳೂ ಜಾಮೀನು ಪಡೆದುಕೊಂಡಿದ್ದಾರೆ.