ಜಮ್ಮು,ಅ 11 (DaijiworldNews/MS): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವಿನ ಎನ್ಕೌಂಟರ್ನಲ್ಲಿ ಭಾರತೀಯ ಸೇನೆಯ ಶ್ವಾನವೊಂದು ಸೋಮವಾರ ತೀವ್ರವಾಗಿ ಗಾಯಗೊಂಡಿದೆ.
ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಅಡಗಿರುವ ಸುಳಿವು ದೊರಕಿ ಭದ್ರತಾ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಸಂದರ್ಭ ಭಯೋತ್ಪಾದಕರು ಅಡಗಿರುವ ಮನೆಯನ್ನು ಪತ್ತೆ ಹಚ್ಚಿ ದಾಳಿ ನಡೆಸಲು ಭಾರತೀಯ ಸೇನೆಯ ಶ್ವಾನ " ಜೂಮ್" ನ್ನು ನಿಯೋಜಿಸಲಾಗಿತ್ತು.
ಜೂಮ್ ಹೆಚ್ಚು ತರಬೇತಿ ಪಡೆದ ನಾಯಿಯಾಗಿದ್ದು, ಉಗ್ರ ಮತ್ತು ಗಟ್ಟಿಯಾದ ಕೋರೆಹಲ್ಲು ಹೊಂದಿತ್ತು. ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಸೆದೆಬಡಿಯಲು ಇದನ್ನು ತರಬೇತಿ ನೀಡಲಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಜೂಮ್ ಅನೇಕ ಸಕ್ರಿಯ ಕಾರ್ಯಾಚರಣೆಗಳ ಭಾಗವಾಗಿತ್ತು.
ಉಗ್ರರ ಇರುವಿಕೆ ಪತ್ತೆ ಹಚ್ಚಿದ ನಾಯಿ ಮನೆಯೊಳಗೆ ಹೋಗಿ ದಾಳಿ ಮಾಡಿದೆ. ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಎರಡು ಗುಂಡುಗಳನ್ನು ಹೊಡೆಸಿಕೊಂಡ ’ಜೂಮ್ ’ಗೆ ತೀವ್ರವಾದ ಗಾಯವಾಗಿದೆ. ಆದರೂ ಹಿಂದೆಸರಿಯದ ಜೂಮ್ ಹೋರಾಡುತ್ತಲೇ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇತ್ತು.ತೀವ್ರವಾದ ಗಾಯಗಳ ನಡುವೆಯೂ ಕೆಚ್ಚೆದೆಯುಳ್ಳ ಜೂಮ್ ಸೈನಿಕ ತನ್ನ ಕಾರ್ಯವನ್ನು ಮುಂದುವರೆಸಿ, ಕೊನೆಗೆ ಇದು ಇಬ್ಬರು ಭಯೋತ್ಪಾದಕರ ಹತ್ಯೆಗೆ ಕಾರಣವಾಯಿತು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂಮ್ ನ್ನು ಸೇನೆಯ ಪಶು ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದ್ದು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ. ಸೇನೆಯ ಚಿನಾರ್ ಕಾರ್ಪ್ಸ್ ವಿಭಾಗವು ಕಾರ್ಯಾಚರಣೆಯಲ್ಲಿ ತನ್ನ ಶ್ವಾನ ದಳದ ಕೊಡುಗೆಯನ್ನು ಗೌರವಿಸಲು ಬ್ರೇವ್ಹಾರ್ಟ್ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ.