ಚೆನ್ನೈ, ಅ 11 (DaijiworldNews/MS): ತಮಿಳು ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಮದುವೆ ಆದ ನಾಲ್ಕೇ ತಿಂಗಳಿಗೆ ಮಗು ಪಡೆದಿದ್ದಾರೆ.ಬಾಡಿಗೆ ತಾಯ್ತನದ ಮೂಲಕ ಉಯಿರ್ (ಜೀವನ) ಮತ್ತು ಉಲಗಮ್ (ಜಗತ್ತು) ಎಂಬ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವುದಾಗಿ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
ಈಗ ಇವರು ಮಗು ಪಡೆದ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಬಾಡಿಗೆ ತಾಯ್ತನದ ವಿಚಾರದಲ್ಲಿ ಸರ್ಕಾರ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯತಾರಾ ಹಾಗೂ ವಿಘ್ನೇಶ್ ಗಾಳಿಗೆ ತೂರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಈ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ.
ದಂಪತಿಗಳು, ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಅವರು ನಿಗದಿತ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು (ಡಿಎಂಎಸ್) ನಯನತಾರಾ ಮತ್ತು ಶಿವನ್ ಅವರಿಂದ ವಿವರಣೆಯನ್ನು ಪಡೆಯಲಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ ಜಾರಿಗೆ ತರಲಾಗಿತ್ತು. ಈ ಕಾಯ್ದೆ ಪ್ರಕಾರ ಬಾಡಿಗೆ ತಾಯಿಯು ಆರೋಗ್ಯವಾಗಿರಬೇಕು ಹಾಗೂ ಆಕೆಯ ವಯಸ್ಸು 21-35ರ ಅಂತದರಲ್ಲಿ ಇರಬೇಕು. ಆಕೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಬಹುದು. ಇದರ ಜತೆಗೆ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ. ಅಂದರೆ ಮಗುವನ್ನು ಹೆರುವ ಮಹಿಳೆ ದಂಪತಿಯಿಂದ ವೈದ್ಯಕೀಯ ವೆಚ್ಚವನ್ನು ಹೊರತುಪಡಿಸಿ ಹಣ ಪಡೆಯುವಂತಿಲ್ಲ. ದಂಪತಿ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನಯನತಾರಾ ಮತ್ತು ಶಿವನ್ ದಂಪತಿ ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.
ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಬ್ರಮಣಿಯನ್, ನಿಯಮಗಳ ಪ್ರಕಾರ, 21 ರಿಂದ 35ವರ್ಷದೊಳಗಿನ ವಿವಾಹಿತ ಮಹಿಳೆ, ಪೋಷಕರು ಅಥವಾ ಗಂಡನ ಅನುಮತಿಯೊಂದಿಗೆ ಅಂಡಾಣುವನ್ನು ದಾನ ಮಾಡಬಹುದು. ನಯನತಾರಾ ದಂಪತಿ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಡಿಎಂಎಸ್ಗೆ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.